ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕಾಗಿ ಗ್ರಾಮ ವಾಸ್ತವ್ಯ: ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು.

ಮೈಸೂರು,ಮಾರ್ಚ್,10,2022(www.justkannada.in): ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಮೀಪಿಸುತ್ತಿದ್ದು  ಈ ನಡುವೆ  ಉತ್ತಮ ಫಲಿತಾಂಶಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳು ಗ್ರಾಮವಾಸ್ತವ್ಯ ಮಾಡಿ ವಿದ್ಯಾರ್ಥಿಗಳಿಗೆ , ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ  ಕ್ಷೇತ್ರಶಿಕ್ಷಣಾಧಿಕಾರಿ ಸಿಎಂ ರಾಜು ಶಿಕ್ಷಣ ಸಂಯೋಜಕರಾದ ಆರ್ಸಿಬಿ ಮಹೇಶ್  ಹಾಗೂ ಎಸ್ಎಸ್ಎಲ್ ನೋಡಲ್ ಅಧಿಕಾರಿ ರಮೇಶ್ ಸಿಆರ್ ಪಿ  ಚಿನ್ನಸ್ವಾಮಿ ಅವರು ಗ್ರಾಮಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ , ಪೋಷಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಎಸ್ ಎಸ್ ಎಲ್ ಸಿ ತರಗತಿಗಳಿಗೆ ಗೈರು ಹಾಜರಾಗುತ್ತಿರುವ ಹಾಗೂ ಮುಖ್ಯ ಪರೀಕ್ಷೆಗೆ ಗೈರುಹಾಜರಾಗುವ ಸಂಭವನೀಯ ಇರುವಂತಹ ವಿದ್ಯಾರ್ಥಿಗಳ ಮನೆಗಳಿಗೆ ಮಲ್ಕೊಂಡಿಪುರ ಯಡಿಯಾಲ ಗ್ರಾಮಗಳಿಗೆ ಭೇಟಿ ನೀಡಿ ಪೋಷಕರಿಗೆ ಎಸೆಸೆಲ್ಸಿ ಪರೀಕ್ಷೆಯ ಮಹತ್ವದ ಬಗ್ಗೆ ತಿಳಿ ಹೇಳಲಾಯಿತು. ಮದುವನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ರಾತ್ರಿವಾಸ್ತವ್ಯ  ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಶಾಲೆಗೆ ಕಳಿಸುವಂತೆ ಪರೀಕ್ಷಾ ಸಂದರ್ಭದಲ್ಲಿ ಹೇಗೆ ವ್ಯಾಸಂಗ ಮಾಡಬೇಕು ಎನ್ನುವುದರ ಬಗ್ಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಚಿಸಲಾಯಿತು. ಪರೀಕ್ಷೆ ಟಿಪ್ಸ್ ಅನ್ನು ಸಹ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ನೀಡಿದರು. ರಾತ್ರಿ ಸುಮಾರು ಹತ್ತು ಗಂಟೆವರೆಗೂ  ಮನೆಗಳಿಗೆ ಭೇಟಿ ನೀಡಿ ಪೋಷಕರುಗಳಿಗೆ ಜಾಗೃತಿಯನ್ನು ಮೂಡಿಸಿದರು.

ಮದುವನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ರಾತ್ರಿವಾಸ್ತವ್ಯದ ಬಳಿಕ ಮರುದಿನ ಬೆಳಗ್ಗೆ 5 ಗಂಟೆಗೆ ಎದ್ದು ಮದುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮಕ್ಕಳ ವ್ಯಾಸಂಗದ ಬಗ್ಗೆ ಪರಿಶೀಲನೆ ಮಾಡಿ ಮಕ್ಕಳಿಗೆ ಮತ್ತು ಪೋಷಕರಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.

ನಂತರ ಹೊಸವೀಡು ಗ್ರಾಮಕ್ಕೆ  ಭೇಟಿ ನೀಡಿ ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಓದುವುದರ ಬಗ್ಗೆ ಮತ್ತು ಪೋಷಕರ ಬಗ್ಗೆ ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಮಡುವಿನಹಳ್ಳಿ ಎಸ್ ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಯಡಿಯಾಲ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಬಸವರಾಜು ಹಾಗೂ ಗ್ರಾಮದ ಮುಖಂಡರು ಹಾಜರಿದ್ದು ಸಹಕರಿಸಿದರು.

ಒಟ್ಟಾರೆ ಸರ್ಕಾರಿ ಪ್ರೌಢಶಾಲೆಯ ಶಾಲಾ ವಾಸ್ತವ್ಯಕ್ಕೆ ಅಧಿಕಾರಿಗಳು ಬಂದಿರುವಂತದ್ದು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ತುಂಬಾ ಹರ್ಷದಾಯಕವಾದಂತಹ ವಿಚಾರ ಎಂದು ಗ್ರಾಮಸ್ಥರು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

Key words: mysore-SSLC-Exam-officer