ಮೈಸೂರಿನಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ದಾಳಿ: 1.37 ಕೋಟಿ ಮೌಲ್ಯದ ಮದ್ಯಸಾರ ವಶ: ನಾಲ್ವರ ಬಂಧನ…

ಮೈಸೂರು,ನ,18,2019(www.justkannada.in): ಮೈಸೂರಿನಲ್ಲಿ ಅಕ್ರಮವಾಗಿ ಮದ್ಯಸಾರ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 1.37 ಕೋಟಿ ಮೌಲ್ಯದ ಮದ್ಯಸಾರ ವಶಕ್ಕೆ ಪಡೆದು ನಾಲ್ವರು ಚಾಲಕರನ್ನ ಬಂಧಿಸಿದ್ದಾರೆ.

ಗಣೇಶ್, ಸೇಲ್ವರ್ ಸನ್, ರಾಜೇಶ್ಕಣ್ಣನ್, ಡಾನ್  ಬಹದ್ದೂರ್ ಯಾದವ್ ಬಂಧಿತ ಟ್ಯಾಂಕರ್ ಚಾಲಕರು. ಬಂಧಿತರು ನಾಲ್ಕು ಟ್ಯಾಂಕರ್ ಗಳಲ್ಲಿ ರಾಜ್ಯದಿಂದ ಕೇರಳಾಗೆ ಮದ್ಯಸಾರವನ್ನ ಸಾಗಿಸುತ್ತಿದ್ದರು. ಈ ನಡುವೆ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಿನಕಲ್ ಕಡೆ ಹೋಗುವ ರಿಂಗ್ ರಸ್ತೆಯಲ್ಲಿ ಅಬಕಾರಿ ಜಂಟಿ ಆಯುಕ್ತ ಡಾ.ವೈ ಮಂಜುನಾಥ್ ನೇತೃತ್ವದಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಸುಮಾರು 1 ಲಕ್ಷ ಲೀಟರ್  ಮದ್ಯಸಾರ ಸಾಗಿಸುತ್ತಿರುವುದು ತಿಳಿದು ಬಂದಿತ್ತು.

ಈ ವೇಳೆ ಅಬಕಾರಿ ಅಧಿಕಾರಿಗಳು ಟ್ಯಾಂಕರ್  ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ  ಅಬಕಾರಿ ಉಪ ಅಧೀಕ್ಷಕರಾದ ಮಹದೇವ್, ಅಬಕಾರಿ ನಿರೀಕ್ಷಕರಾದ ಆನಂದ್ ಕುಮಾರ್ ಮತ್ತು ಸಿಬ್ಬಂದಿಗಳಾದ ರಮೇಶ್, ವೇಣುಗೋಪಾಲ್  ಪಾಲ್ಗೊಂಡಿದ್ದರು.

Key words: mysore- raid -excise officer- 1.37 crore -worth -liquor -seized