JK EXCLUSIVE : ನಿರ್ಜನ ಪ್ರದೇಶದಲ್ಲಿ ವೈದ್ಯ ವಿದ್ಯಾರ್ಥಿಗಳ ಮೋಜು, ಮಸ್ತಿ : ಠಾಣೆಗೆ ಕರೆತಂದು ತಿಳಿ ಹೇಳಿದ ಪೊಲೀಸರು.

 

ಮೈಸೂರು, ಸೆ.08, 2021 : (www.justkannada.in news) : ಎಂಬಿಎ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ನಡೆದ ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ, ಯುವಕರು ಮೋಜು, ಮಸ್ತಿಗೆ ತೆರಳಿದ್ದನ್ನು ಪೊಲೀಸರು ಪತ್ತೆ ಹಚ್ಚಿ ಅವರಿಗೆ ‘ ಸರಿ’ ಬುದ್ಧಿ ಹೇಳಿದ ಘಟನೆ ನಡೆದಿದೆ.

ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಘಟನೆ ನಡೆದ ಸ್ಥಳದ ಸಮೀಪದಲ್ಲೇ ಇದು ಪತ್ತೆಯಾಗಿರುವುದು, ಯುವ ಸಮುದಾಯಕ್ಕೆ ಪ್ರಕರಣದ ಗಂಭೀರತೆ ಅರಿವಿಲ್ಲದಿರುವುದು ವಿಪರ್ಯಾಸ.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ( ಹೊರ ರಾಜ್ಯದ ನೊಂದಣಿ ಕಾರು ) ಬಂದ ಮೂವರು ಯುವಕರು ಹಾಗೂ ಒರ್ವ ಯುವತಿ ಮದ್ಯದ ಬಾಟಲಿಗಳ ಜತೆಗೆ ಕಾರಿನಿಂದ ಇಳಿದು ತೆರಳುತ್ತಿರುವುದನ್ನು ಗಮನಿಸಿದ ದಾರಿಹೋಕರು, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಫೋನ್ ಕರೆಯನ್ನಾಧರಿಸಿ ಆಲನಹಳ್ಳಿ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದರು. ಆಗ ನಿರ್ಜನ ಪ್ರದೇಶದಲ್ಲಿದ್ದ ಯುವತಿ ಹಾಗೂ ಯವಕರನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದರು. ಆಘಾತಕಾರಿ ವಿಶೇಷವೆಂದರೆ ಈ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದವರಾಗಿದ್ದು, ಮೋಜು ಮಸ್ತಿಗಾಗಿ ನಿರ್ಜನ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ.

ಸಾರ್ವಜನಿಕರ ಫೋನ್ ಕರೆ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ ಬಳಿಕ, ಪೊಲೀಸರು ಅವರ ಪೋಷಕರಿಗೂ ಕರೆ ಮಾಡಿ ಮಾಹಿತಿ ನೀಡಿ ಎಚ್ಚರಿಕೆ ನೀಡಿದರು ಎನ್ನಲಾಗಿದೆ. ಯುವ ಸಮುದಾಯ ಈ ರೀತಿ ಅಡ್ಡ ಮಾರ್ಗದಲ್ಲಿ ಸಾಗುತ್ತಿರುವುದು ವಿಪರ್ಯಾಸ.

ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಮೈಸೂರು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಖುದ್ದು, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರೇ ರಿಂಗ್ ರಸ್ತೆಗಳ ಬಳಿ ಹಾಗೂ ನಗರದ ಹೊರ ವಲಯದ ನಿರ್ಜನ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿರುವುದು ಗಂಭೀರತೆಗೆ ಸಾಕ್ಷಿ. ಪೊಲೀಸರಿಗೆ ಪೂರಕವಾಗಿ ಸಾರ್ವಜನಿಕರು, ಇಂಥ ಘಟನೆಗಳನ್ನು ಕಂಡ ಕೂಡಲೇ ಮಾಹಿತಿ ನೀಡುವ ಮೂಲಕ ಸಹಕರಿಸಿದರೆ ಮುಂದಾಗುವ ಅಪಾಯ ತಪ್ಪಿಸಬಹುದು.

key words : Mysore-police-medical-student-warns-Karnataka