ಮೈಸೂರು ಅರಮನೆಯ ಆನೆಗಳು ಗುಜರಾತ್ ಗೆ ಸ್ಥಳಾಂತರ..

 

ಮೈಸೂರು, ಡಿ.15, 2021 : (www.justkannada.in news ) ಇಲ್ಲಿನ ಅರಮನೆ ಆನೆಗಳನ್ನು ಗುಜರಾತ್ ನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಮಂಗಳವಾರ ರಾತ್ರಿ 9. 30 ರ ಸುಮಾರಿಗೆ ಅರಮನೆ ಆವರಣದಿಂದ ಆನೆಗಳು ಲಾರಿಗಳ ಮೂಲಕ ನಿರ್ಗಮಿಸಿದವು.

ಅರಮನೆಯಲ್ಲಿ ಆನೆಗಳ ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಗುಜರಾತಿನ ಆನೆ ಪುನರ್ವಸತಿ ಕೇಂದ್ರಕ್ಕೆ ಈ ಆನೆಗಳನ್ನು ಕಳಿಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಅರಣ್ಯ ಇಲಾಖೆ ಸಹ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಲಾರಿ ಮೂಲಕ ಆನೆಗಳನ್ನು ಸಾಗಣೆ ಮಾಡಲಾಯಿತು. ಈ ಸುದ್ದಿ ಪ್ರಕಟಗೊಳ್ಳುವ ವೇಳೆಗೆ (ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ) ಆನೆಗಳನ್ನು ಹೊತ್ತು ಸಾಗುತ್ತಿರುವ ಲಾರಿಗಳು ಕೊಪ್ಪಳ ಜಿಲ್ಲೆಯನ್ನು ದಾಟಿದ್ದವು.

ಅರಮನೆಯ ಆನೆಗಳ ಆರೋಗ್ಯ ದೃಷ್ಟಿಯಿಂದ ಅರಮನೆಯ ನಾಲ್ಕು ಆನೆಗಳಾದ ಸೀತಾ,ರೂಬಿ,ಜಮಿನಿ ಮತ್ತು ರಾಜೇಶ್ವರಿ ಆನೆಗಳನ್ನ ಗುಜರಾತಿನ‌ ಪುನರ್ವಸತಿ ಕೇಂದ್ರಕ್ಕೆ ರವಾನಲಾಗಿದೆ.

ಈ ಹಿಂದೆ ಒಡೆಯರ್ ಅವರು ಜೆಮಿನಿ ಸರ್ಕಸ್ ನಿಂದ ಆನೆಗಳನ್ನು ವಶಕ್ಕೆ ಪಡೆದು ಆಶ್ರಯ ನೀಡಿದ್ದರು. ಆರು‌ ಆನೆಗಳ ಫೈಕಿ ನಾಲ್ಕು‌ ಆನೆಗಳು ಗುಜರಾತಿಗೆ ಸ್ಥಳಾಂತರ ಮಾಡಲಾಗುತ್ತಿದ್ದು ಎರಡು ಆನೆಗಳನ್ನ‌ ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಮೈಸೂರು ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ವಿ.ಕರಿಕಾಳನ್, ಮಂಗಳವಾರ ರಾತ್ರಿ ಮೈಸೂರಿನಿಂದ ಗುಜರಾತ್ ಗೆ ಆನೆಗಳು ತೆರಳಿರುವುದನ್ನು ದೃಢಪಡಿಸಿದರು.

 

key words : Mysore-palace-elephant-shifted-to-Gujarat-rehabilitation-center