ನಾನು ಸಚಿವನಾಗಿರೋದನ್ನ ಸಹಿಸೋಕೆ ಆಗ್ತಿಲ್ಲ: ದೇವೇಗೌಡರಿಗೆ ಹತ್ತಿರ ಆಗಲು ನನ್ನನ್ನ ಬೈತಾ ಇದ್ದಾರೆ-ಸಚಿವ ನಾರಾಯಣ್ ಗೌಡ ಕಿಡಿ.

ಮೈಸೂರು,ಮಾರ್ಚ್,27,2022(www.justkannada.in):  ಮಂಡ್ಯದಲ್ಲಿ ಸಚಿವ ನಾರಾಯಣಗೌಡ ಏನು ಕೆಲಸ ಮಾಡ್ತಿಲ್ಲ ಎಂದು ಹೇಳಿಕೆ ನೀಡಿದ ಶಾಸಕ ಸುರೇಶ್‌ಗೌಡ ವಿರುದ್ಧ ಸಚಿವ ನಾರಾಯಣಗೌಡ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಸಿ ನಾರಾಯಣ್,  ತನ್ನನ್ನು ಕಂಡರೆ ಸುರೇಶ್‌ಗೌಡಗೆ ಹೊಟ್ಟೆ ಉರಿ. ನಾನು ಸಚಿವನಾಗಿರೋದನ್ನ ಸಹಿಸೋಕೆ ಆಗ್ತಿಲ್ಲ. ದೇವೇಗೌಡರಿಗೆ ಹತ್ತಿರ ಆಗೋದಕ್ಕೆ ನನ್ನನ್ನ ಬೈತಾವ್ರೆ. ನನ್ನನ್ನ ಬೈದರೆ ದೇವೇಗೌಡ್ರು ಸುರೇಶ್‌ಗೌಡರಿಗೆ ಎನೋ ಕೊಡುಬಹುದು ಅನ್ಸುತ್ತೆ. ಅದಕ್ಕೆ ನನ್ನ ಮೇಲೆ ಸುರೇಶ್‌ಗೌಡ ಆರೋಪ ಮಾಡ್ತಾರೆ ಎಂದು ಶಾಸಕ ಸುರೇಶ್ ಗೌಡ ವಿರುದ್ಧ ಕಿಡಿಕಾರಿದರು.

ಸುರೇಶ್‌ಗೌಡ ತನ್ನ ಕೆಲಸ ಮಾಡಿಸಿಕೊಳ್ಳಕೆ ನನ್ನ ಹತ್ತಿರ ಬರ್ತಾರೆ. ನನ್ನ ಏಳಿಗೆ ಕಂಡ್ರೆ ಅವ್ರಿಗೆ ಸಹಿಸಲಿಕ್ಕೆ ಆಗೋದಿಲ್ಲ. ನನ್ನ ರೀತಿ ಸಚಿವನಾಗಬೇಕು ಅಂತಾ ಆಸೆ ಅವರಿಗೆ. ಆದ್ರೆ ಸಚಿವನಾಗೋದಕ್ಕೆ ಆಗ್ಲಿಲ್ಲ.

ಅದಕ್ಕೆ ನನ್ನ ಮೇಲೆ ಹೊಟ್ಟೆ ಉರಿ ಆಗಿದೆ, ತಲೆ ಗಿರ್ ಅನ್ನುತ್ತೆ ಸುರೇಶ್‌ಗೌಡನಿಗೆ.  ನಾನು ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸ ಅವ್ರಿಗೆ ಸಹಿಸೋಕೆ ಆಗ್ತಿಲ್ಲ. ನಾನು ನನ್ನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸುರೇಶ್‌ಗೌಡ್ರ ಕ್ಷೇತ್ರ ನಾಗಮಂಗಲಕ್ಕೆ ಏತ ನೀರಾವರಿ, ಕುಡಿಯುವ ನೀರಿನ ಕೆಲಸ ಮಾಡಿದ್ದೇವೆ. ಅದನ್ನ ಸುರೇಶ್‌ಗೌಡ ಮೊದಲು ತಿಳಿದು ಮಾತನಾಡಲಿ ಎಂದು ಹರಿಹಾಯ್ದರು.

ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಸಚಿವ ನಾರಾಯಣ್, ಹಿಜಾಬ್ ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲೂ ರಾಜಕೀಯ ಲಾಭ ಪಡೆಯಲು ಹೋಗ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ಬಳಿ ವ್ಯಾಪಾರ ವಿಚಾರ ಬಂದಿರೋದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಕಾಂಗ್ರೆಸ್‌ನವರು ಮಾಡಿರುವ ನಿಯಮಗಳನ್ನ ಮುಂದುವರೆಸಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಈ ನಿಯಮ ಬಂದಿರೋದು. ನಾವು ಹೊಸದಾಗಿ ಯಾವುದನ್ನು ಮಾಡಿಲ್ಲ. ಸಿದ್ದರಾಮಯ್ಯನವರು ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲಾ ಬಿಡಬೇಕು, ಅನವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ವೋಟ್‌ ಬ್ಯಾಂಕ್‌ ಗಾಗಿ ಈ ರೀತಿ ವಿವಾದಗಳನ್ನ ಕಾಂಗ್ರೆಸ್‌ನವರು ಸೃಷ್ಟಿ ಮಾಡ್ತಾರೆ. ಇದೆಲ್ಲಾ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.

Key words: mysore-minister-kc narayanagowda-congress