ಮೈಸೂರಿನ ಪ್ರತಿಷ್ಠಿತ ಮಹಾರಾಜ ಪದವಿ ಕಾಲೇಜಿನಲ್ಲೇ ‘ಕನ್ನಡ’ ಕಣ್ಮರೆ: ಸಾಮಾಜಿಕ ಜಾಲತಾಣಗಳಲ್ಲಿ  ಭಾರಿ ಆಕ್ರೋಶ..

ಮೈಸೂರು,ಅ,26,2019(www.justkannada.in):  ಮೈಸೂರಿನ ಪ್ರತಿಷ್ಠಿತ ಮಹಾರಾಜ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲೇ ಕನ್ನಡದ ನಾಮಫಲಕ ಹಾಕದೇ ಇದೀಗ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಕನ್ನಡ ಭಾಷೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು, ರವೀಂದ್ರನಾಥ್ ಠಾಗೂರ್ ಅವರ ಆದಿಯಾಗಿ ಅನೇಕ ಖ್ಯಾತನಾಮರು ವಿದ್ಯಾಭ್ಯಾಸ ಮಾಡಿದ ಮಹಾರಾಜ ಕಾಲೇಜಿನಲ್ಲೇ ಕನ್ನಡ ಕಣ್ಮರೆಯಾಗಿದ್ದು ಕನ್ನಡಾಭಿಮಾನಿಗಳನ್ನ ಕೆರಳಿಸಿದೆ. ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ನಾಮಫಲಕ  ಹಾಕುವ ಬದಲು ಅಂಗ್ಲಭಾಷೆಯಲ್ಲಿ ನಾಮಫಲಕ ಹಾಕಿದ್ದು ಕಾಲೇಜಿನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ  ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಟ್ವಿಟರ್ ನಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಪೋಟೋ ಸಮೇತ ಪೋಸ್ಟ್ ಮಾಡಿದ್ದಾರೆ, ಇನ್ನೇನೂ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಾಗಲೇ ಪ್ರತಿಷ್ಟಿತ ಕಾಲೇಜಿನಲ್ಲಿ ಈ ರೀತಿಯ ನಡೆ ಖಂಡನೀಯವಾಗಿದೆ. ಐತಿಹಾಸಿಕ ಭಾಷಾಭಿಮಾನದ ತವರೆಂಬ ಖ್ಯಾತಿ ಪಡೆದಿರುವ ಕಾಲೇಜಿನ ಕನ್ನಡ ವಿಭಾಗದಲ್ಲೇ  ಈ ಸ್ಥಿತಿ ನಿರ್ಮಾಣವಾಗಿದ್ದು  ಕನ್ನಡ ತವರು ಕಾಲೇಜಿನಲ್ಲೇ ಈ ಸ್ಥಿತಿಯಾದರೆ ಉಳಿದೆಡೆಯ ಕಥೆ ಎನೂ ಎಂಬುದೇ ಕನ್ನಡಾಭಿಮಾನಿಗಳ ಪ್ರಶ್ನೆಯಾಗಿದೆ.

ಹೀಗಾಗಿ  ಕಾಲೇಜಿನ ನಡೆ ಖಂಡಿಸಿ ಪ್ರತಿಭಟನೆ ಮಾಡುವಂತೆಯೂ ಕೆಲ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಮಾಡಿದ್ದಾರೆ. ಇಂತಹದೊಂದು ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡಾಭಿಮಾನಿಗಳು ಆಗ್ರಹಿಸಿದ್ದಾರೆ.

Key words: mysore- Maharaja College-kannada-  outrage – social media