ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ‘ ಸುಧರ್ಮ ಪತ್ರಿಕೆ’ ಗೆ ಸರಕಾರದ ಸಕಲ ನೆರವು : ಕ್ಯಾ.ಮಣಿವಣ್ಣನ್ ಸಂದೇಶ ತಲುಪಿಸಿದ ವಾರ್ತಾಧಿಕಾರಿ

 

ಮೈಸೂರು, ಜನವರಿ 26, 2020 ( www.justkannada.in news ): ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಶ್ರೀಮತಿ ಕೆ.ಎಸ್.ಜಯಲಕ್ಷ್ಮಿ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪರವಾಗಿ ಸಹಾಯಕ ನಿರ್ದೇಶಕ ಆರ್. ರಾಜು ಅವರು ಭಾನುವಾರ ದಂಪತಿಗಳನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಸಾಹಿತ್ಯ, ಶಿಕ್ಷಣ ಹಾಗೂ ಪತ್ರಿಕೋದ್ಯಮ ಸೇವೆ ಮಾಡುತ್ತಿರುವ ದಂಪತಿಗಳಿಗೆ ನೀಡಿರುವುದು ಅಪರೂಪದ ಸಂಗತಿ. ಭಾರತ ಸರ್ಕಾರ ನಿಮ್ಮ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡುವುದು ನಿಜಕ್ಕೂ ಔಚಿತ್ಯಪೂರ್ಣವಾಗಿದೆ ಎಂದರು.

‘ಸುಧರ್ಮ’ ದಿನಪತ್ರಿಕೆಯು ವಿಶ್ವದಲ್ಲೇ ಸಂಸ್ಕೃತ  ಭಾಷೆಯಲ್ಲಿ ಪ್ರಕಟವಾಗುವ ಏಕೈಕ ದಿನಪತ್ರಿಕೆ ಎಂಬ ಹೆಗ್ಗಳಿಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ. ಈ ಪತ್ರಿಕೆ ಬೆಳವಣಿಗೆಗೆ ಹಾಗೂ ನಿರಂತರವಾಗಿ ಪ್ರಕಟವಾಗಲು ಬೇಕಾಗುವ ಪ್ರೋತ್ಸಾಹವನ್ನು ಒದಗಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಗತ್ಯ ನೆರವನ್ನು ನೀಡಲು ಸರ್ಕಾರದ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಪಿ.ಮಣಿವಣ್ಣನ್ ಹಾಗೂ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂಬುದನ್ನು ಕೆ.ವಿ.ಸಂಪತ್ ಕುಮಾರ್ ಅವರಿಗೆ ತಿಳಿಸಿದರು.

mysore-journalist-sudharma-sanskrit-papper-padmashree-award

ಸುಧರ್ಮ ಸಂಸ್ಕೃತ ದಿನಪತ್ರಿಕೆಗೆ ಸರ್ಕಾರದ ನೆರವು ಖಂಡಿತವಾಗಿಯು ಬೇಕಾಗಿದೆ. ಈ ಫೆಬ್ರವರಿಯ ಕೊನೆಯ ವಾರದಲ್ಲಿ ಪತ್ರಿಕೆಯ ಸುವರ್ಣ ಮಹೋತ್ಸವ ಆಚರಿಸುವ ಉದ್ದೇಶವಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ಕೆ.ವಿ.ಸಂಪತ್ ಕುಮಾರ್ ಅವರು ತಿಳಿಸಿದರು.

Key words : mysore-journalist-sudharma-sanskrit-papper-padmashree-award