ಈ ಸಾಲಿನ ರಾಷ್ಟ್ರೀಯ ಕಲೋತ್ಸವದಲ್ಲಿ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆ ಪ್ರತಿಭೆಗಳು….

 

ಮೈಸೂರು, ಜನವರಿ 5,2021(www.justkannada.in): ಭಾರತ ಸರ್ಕಾರ ಜನವರಿ 15 ರಿಂದ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಲು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಚಿತ್ರಕಲಾ ಶಿಕ್ಷಕಿ ಕೆ. ಸಂಗೀತಾ ಅವರು ತಿಳಿಸಿದ್ದಾರೆ.mysore-hd-kote-student-rastriya-kalotsva-participate

ಶಿಕ್ಷಣದಲ್ಲಿ ಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಅದರ ವೈವಿಧ್ಯತೆಯ ಅರಿವನ್ನು ಶಾಲಾ ಮಕ್ಕಳಿಗೆ ಮೂಡಿಸಲು ಭಾರತ ಸರ್ಕಾರದ ಶಾಲಾ ಶಿಕ್ಷಣ ಸಚಿವಾಲಯದ ವತಿಯಿಂದ ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕಲೋತ್ಸವ’ಸ್ಪರ್ಧೆಗೆ ಕರ್ನಾಟಕ ಸರ್ಕಾರ 18 ವಿದ್ಯಾರ್ಥಿಗಳನ್ನು ಕಳುಹಿಸುತ್ತದೆ. ಈ ಪೈಕಿ ದೃಶ್ಯಕಲೆ ವಿಭಾಗದಲ್ಲಿ ಒಟ್ಟು 6 ಮಕ್ಕಳು ಆಯ್ಕೆ ಆಗುತ್ತಾರೆ.  ಅದರಲ್ಲಿ ನಮ್ಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಐಶ್ವರ್ಯ ಜಿ. ಅವರು 3ಡಿ ಸ್ಪರ್ಧೆಯಲ್ಲಿ ಹಾಗೂ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಚಂದನ ಎ. ಅವರು ಸ್ಥಳೀಯ ಆಟಿಕೆಗಳು ಮತ್ತು ಆಟಗಳ ಸ್ಪರ್ಧೆಯಲ್ಲಿ ಆಯ್ಕೆಯಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಐಶ್ವರ್ಯ ಜಿ. ಅವರು 3ಡಿ ಸ್ಪರ್ಧೆಯಲ್ಲಿ ಮಣ್ಣಿನಿಂದ ಹುಲಿವಾಹನದಲ್ಲಿ ಕುಳಿತ ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ರಚಿಸಿದ್ದು ಆಯ್ಕೆಗೆ ಪರಿಗಣಿತವಾಗಿದೆ. ಚಂದನ ಎ. ಅವರು ಸೋರೆಕಾಯಿಯ ಮೇಲೆ ಮೂಡಿಸಿದ ವರ್ಣಚಿತ್ರಕಲೆಗಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಕಲೋತ್ಸವವು 2015ರಿಂದ ಪ್ರತಿವರ್ಷ ನವದೆಹಲಿಯಲ್ಲಿ ನಡೆಯುತ್ತದೆ. ಒಟ್ಟು 9 ಪ್ರಕಾರದ ಸ್ಪರ್ಧೆಗಳಿರುತ್ತವೆ. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡಬೇಕು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಮಕ್ಕಳನ್ನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.

ನಶಿಸುತ್ತಿರುವ ಕಲೆಗಳನ್ನು ಉಳಿಸುವ ಪ್ರಯತ್ನವನ್ನು ನಮ್ಮ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಸೋರೆಕಾಯಿಯಿಂದ ಕಲಾಕೃತಿಗಳನ್ನು ಬಹುಹಿಂದಿನಿಂದಲೂ ಬುಡಕಟ್ಟು ಜನರು ಮಾಡುತ್ತಿದ್ದರು. ಅಂತಹದ್ದೇ ಪ್ರಯೋಗವನ್ನು ಚಂದನ ಎ. ಮಾಡಿದ್ದಾರೆ. ಸೋರೆಕಾಯಿ ಬಳಸಿ ಚನ್ನಪಟ್ಟಣದ ಗೊಂಬೆ ಮಾದರಿಯ ಗೊಂಬೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.mysore-hd-kote-student-rastriya-kalotsva-participate

ಮಣ್ಣಿನ ಪಾತ್ರೆಗಳನ್ನು ವಿಗ್ರಹಗಳನ್ನು ಹಿಂದಿನಿಂದಲೂ ಮಾಡಲಾಗುತ್ತಿತ್ತು. ಈಗ ಆ ಕಲೆ ಮಾಯವಾಗುತ್ತಿದೆ. ನಮ್ಮ ವಿದ್ಯಾರ್ಥಿ ಐಶ್ವರ್ಯ ಜಿ. ಅವರು ಹುಲಿವಾಹನದಲ್ಲಿ ಶ್ರೀಚಾಮುಂಡೇಶ್ವರಿ ಮೂರ್ತಿಯನ್ನು ಮಣ್ಣಿನಿಂದ ಮಾಡಿದ್ದಾರೆ. ಶ್ರೀಚಾಮುಂಡೇಶ್ವರಿ ಮೈಸೂರು ಜಿಲ್ಲೆಯ ಪ್ರತೀಕ. ಹಾಗಾಗಿ ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತಾ ಕೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಲಾಭ್ಯಾಸ ಮಾಡಿ, ಈ ಸಾಧನೆ ಮಾಡಿದ್ದಾರೆ. ಪ್ರತಿ ವರ್ಷ ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ಕರ್ನಾಟಕದಿಂದ ಆಯ್ಕೆಯಾದ ಮಕ್ಕಳ ಪೈಕಿ ನಮ್ಮ ಶಾಲೆಯ ಇಬ್ಬರು ಮಕ್ಕಳು ಆಯ್ಕೆಯಾಗಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಜಿ.ಹೆಚ್. ಮಲ್ಲೇಶ್ ಅವರು ತಿಳಿಸಿದ್ದಾರೆ.

Key words: mysore- HD Kote-student-rastriya kalotsva-participate