ಮೈಸೂರು ಅತ್ಯಂತ ಸಂತೋಷದಾಯಕ ನಗರ; ಅರಮನೆ ನಗರಕ್ಕೆ ಹೊಸ ಬ್ರ್ಯಾಂಡ್- ಸಚಿವ ಡಾ.ಸಿ.ಎನ್.‌ಅಶ್ವತ್ ನಾರಾಯಣ್.

ಮೈಸೂರು, ಆಗಸ್ಟ್,20,2021(www.justkannada.in):  ದೇಶದ ಅತ್ಯಂತ ಸಂತೋಷದಾಯಕ ನಗರಗಳಲ್ಲಿ ಒಂದು ಎಂದು ಅರಮನೆ ನಗರ ಮೈಸೂರನ್ನು ಬ್ರ್ಯಾಂಡ್‌ ಮಾಡಿ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಅನುಸಂಧಾನಗೊಳಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಐಟಿ ಬಿಟಿ, ವಿಜ್ಞಾನ-ತಂತ್ರಜ್ಞಾನ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ್ ಹೇಳಿದರು.

ಮೈಸೂರಿನ ಹೆಬ್ಬಾಳ‌ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಂವಾದ ನಡೆಸಿದ ಸಚಿವ ಅಶ್ವಥ್ ನಾರಾಯಣ್; “ಮೈಸೂರು ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಗರವಾಗಿದೆ. ಅಲ್ಲದೆ, ಮೈಸೂರು ವಿಶ್ವವಿದ್ಯಾಲಯ, ಜೆಎಸ್ ಎಸ್ ವಿವಿ ಸೇರಿದಂತೆ ದೇಶದ ಅತ್ಯುತ್ತಮ ವಿವಿಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಫುರಕವಾಗಿ ಶಿಕ್ಷಣ ಸಂಸ್ಥೆಗಳನ್ನು ಲಿಂಕ್‌ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಮೈಸೂರಿನಲ್ಲಿ ಏನೆಲ್ಲ ಚೆನ್ನಾಗಿದೆ? ಏನೆಲ್ಲ ಸಮಸ್ಯೆಗಳಿವೆ ಎಂಬ ಬಗ್ಗೆ ಸರಕಾರದ ಬಳಿ ಮಾಹಿತಿ ಇದ್ದು, ಕೊರತೆಗಳನ್ನು ಆದ್ಯತೆಯ ಮೇರೆಗೆ ನಿವಾರಣೆ ಮಾಡಲಾಗುವುದು. ಇಂದು ನಗರದಲ್ಲಿ ಆರಂಭವಾದ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅಶ್ವಥ್ ನಾರಾಯಣ್ ಹೇಳಿದರು.

ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಒಪ್ಪಂದ ಆಗಿ ಎರಡೂ ಕ್ಷೇತ್ರಗಳನ್ನು ಒಂದು ಕ್ಲಸ್ಟರ್‌ ರೀತಿಯಲ್ಲಿ ರೂಪಿಸಿ  ಕೈಗಾರಿಕಾಭಿವೃದ್ಧಿ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎನ್ನುವುದು ಸರಕಾರದ ಉದ್ದೇಶ. ಆ ದಿಕ್ಕಿನಲ್ಲಿ ಪ್ರಯತ್ನಗಳು ಆರಂಭವಾಗಿವೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ರೋಬೋಟಿಕ್ಸ್‌ ಕೈಗಾರಿಕೆ ಸ್ಥಾಪನೆ ಬಗ್ಗೆ ಕೆಲ ಉದ್ದಿಮೆದಾರರು ಗಮನ ಸೆಳೆದಾಗ, ಈ ಕ್ಷೇತ್ರಕ್ಕೆ ಅಗತ್ಯವಾದ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರಕಾರ ಕೂಡಲೇ ಕ್ರಮ ವಹಿಸುತ್ತದೆ ಎಂದರಲ್ಲದೆ, ಪೂರಕ ಕೈಗಾರಿಕೆಗಳ ಸ್ಥಾಪನೆಗೂ ಉತ್ಸುಕವಾಗಿದೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಡಿಜಿಟಲ್‌ ಸ್ವರೂಪದ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಮನೆಯಲ್ಲೇ ಕೆಲಸ ಪರಿಕಲ್ಪನೆ ಇನ್ನಷ್ಟು ವ್ಯಾಪಕವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡನೇ, ಮೂರನೇ ಹಂತದ ನಗರಗಳಿಗೆ ಜನರು ಹೆಚ್ಚೆಚ್ಚು ಬರುತ್ತಿದ್ದಾರೆ. ಹೀಗಾಗಿ ಇಂಥ ನಗರಗಳಲ್ಲಿ ಉತ್ತರ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರು ನಗರದಲ್ಲಿ 300ರಿಂದ 400 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್‌ ಪಾರ್ಕ್‌ ನಿರ್ಮಾಣ ಮಾಡುವ ಬಗ್ಗೆಯೂ ಉದ್ದಿಮೆದಾರರು ಸಚಿವರ ಮುಂದೆ ಬೇಡಿಕೆ ಮಂಡಿಸಿದರು.

ಈ ಬೇಡಿಕೆಗೆ ಉತ್ತರಿಸಿದ ಅವರು, ಪ್ರತ್ಯೇಕ ಸಾಫ್ಟ್ʼವೇರ್‌ ಪಾರ್ಕ್‌ ನಿರ್ಮಾಣ ಮಾಡುವುದು ಲಾಭದಾಯಕವೇ ಎಂಬ ಬಗ್ಗೆಯೂ ಯೋಚನೆ ಮಾಡಬೇಕಿದೆ. ಈಗ ಐಟಿ ಕ್ಷೇತ್ರದ ಕೆಲ ಕಂಪನಿಗಳು ಹೆಚ್ಚಾಗಿ ವರ್ಕ್‌ ಫ್ರಮ್ ಹೋಂ ಕಡೆಗೇ ಹೆಚ್ಚು ವಾಲುತ್ತಿರುವ ಕಾರಣಕ್ಕೆ ಕಚೇರಿಗಳ ಸ್ಥಾಪನೆಯ ಬಗ್ಗೆಯೇ ಮರು ಆಲೋಚನೆ ಮಾಡುತ್ತಿವೆ. ಇನ್ನು ಕೆಲ ಕಂಪನಿಗಳು ಸ್ವಂತ ಕಟ್ಟಡಗಳಿಗಿಂತ ಬಾಡಿಗೆ ಕಟ್ಟಡಗಳೇ ಸಾಕು ಎನ್ನುವ ಮಾತನ್ನಾಡುತ್ತಿವೆ ಎಂದರು ಡಾ.ಅಶ್ವತ್ಥನಾರಾಯಣ.

ಮೈಸೂರಿನ‌ ರಾಜವಂಶಸ್ಥ ಯದುವೀರ ಚಾಮರಾಜ ಒಡೆಯರ್, ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್‌, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇಎಸ್‌ ರಮಣ ರೆಡ್ಡಿ, ಇದೇ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌, ಜಿಲ್ಲಾಧಿಕಾರಿ ಬಗಾದಿ ಗೌತಮ್‌, ವಿವಿಧ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Key words: Mysore – happiest city-New brand -Palace City-Minister- Dr. C.N. Ashwath Narayan.