ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಕಾರು ಚಾಲಕ ಆತ್ಮಹತ್ಯೆಗೆ ಶರಣು…

ಮೈಸೂರು,ಸೆ,24,2019(www.justkannada.in): ಮೈಸೂರಿನ ಅವಧೂತ ದತ್ತ ಪೀಠದ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಕಾರು ಚಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾರು ಚಾಲಕ ಮುರಳೀಧರ್ (58)  ಶವಪತ್ತೆಯಾಗಿದೆ. ಮುರಳೀಧರ್ ಹಲವಾರು ವರ್ಷಗಳಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಕಾರು ಚಾಲಕರಾಗಿ ಕೆಲಸ ಮಾಡಿದ್ದರು.  ಅವರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲೇ ನೆಲೆಸಿದ್ದರು.

ಪತ್ನಿ ಸುಧಾಶ್ರೀ ಜೆ.ಕೆ. ಟೈರ್ಸ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿಯೊಂದಿಗೆ ಜಗಳವಾಡಿಕೊಂಡು ಬಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಮುರುಳೀಧರ್ ಅವರು ನಿನ್ನೆ ಬೆಳಿಗ್ಗೆ ಆಶ್ರಮ ತೊರೆದ ನಂತರ ನಾಪತ್ತೆಯಾಗಿದ್ದರು.

ಈ ನಡುವೆ ಉತ್ತನಹಳ್ಳಿ ಮಾರ್ಗವಾಗಿ ತಮ್ಮ ವಾಹನದಲ್ಲಿ ಬಂದು ರಸ್ತೆಯಲ್ಲೇ ವಾಹನ ನಿಲ್ಲಿಸಿ ಅರಣ್ಯ ಪ್ರದೇಶದಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಇಂದು ಬೆಳಿಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ್ದು ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

ಮುರುಳೀಧರ್ ಅವರ ಪುತ್ರ ಸಿಂಗಾಪುರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಪುತ್ರನ ಆಗಮನಕ್ಕಾಗಿ ಕುಟುಂಬಸ್ಥರು  ನಿರೀಕ್ಷಿಸುತ್ತಿದ್ದಾರೆ. ಈ ಕುರಿತು ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Ganesha Sachidananda Swamiji’s- car driver – commits suicide