ನಾಲೆಯಲ್ಲಿ ಸಿಲುಕಿದ್ದ ಗಂಡು ಮರಿಯಾನೆಯನ್ನ ರಕ್ಷಿಸಿ ತಾಯಿ ಆನೆ ಮಡಿಲು ಸೇರಿಸುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿಗಳು  

ಮೈಸೂರು,ಮಾರ್ಚ್,1,2022(www.justkannada.in):  ತಾಯಿಯಿಂದ ಬೇರ್ಪಟ್ಟು ಬರಿದಾದ ನಾಲೆಯಲ್ಲಿ ಸಿಲುಕಿದ್ದ 3 ತಿಂಗಳ ಗಂಡು ಮರಿಯಾನೆಯನ್ನ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು  ರಕ್ಷಣೆ ಮಾಡಿದ್ದಾರೆ.

ನಾಗರಹೊಳೆ ವನ್ಯಜೀವಿ ವಲಯದ ಮೇಟಿಕುಪ್ಪೆ ಅರಣ್ಯದಿಂದ ಕಳೆದ ರಾತ್ರಿ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿನತ್ತ ಗಂಡು ಮರಿಯಾನೆ ಬಂದಿತ್ತು. ಈ ನಡುವೆ. ಬರಿದಾದ ನಾಲೆಯಲ್ಲಿ ಸಿಲುಕಿ ಹೊರಬರಲಾಗದೇ ಮರಿಯಾನೆ ಪ್ರಯಾಸ ಪಡುತ್ತಿತ್ತು. ಮರಿಯನ್ನು ತನ್ನೊಡಲಿಗೆ ಸೇರಿಸಿಕೊಳ್ಳಲು ಪ್ರಯಾಸ ಪಟ್ಟ ತಾಯಿ ಆನೆ ಯತ್ನ ವಿಫಲವಾಗಿತ್ತು.

ಮರಿಯಾನೆಯ ಸ್ಥಿತಿ ಕಂಡ ಸ್ಥಳೀಯರು ಕೂಡಲೇ  ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಎಸಿಎಫ್ ಮಹದೇವು, ಆರ್ ಎಪ್ ಓ ಸತೀಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರು ಸಹಕಾರದೊಂದಿಗೆ ಮರಿಯಾನೆಯನ್ನ ರಕ್ಷಣೆ ಮಾಡಿದರು.

ಈ ಮೂಲಕ ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನ ತಾಯಿಯ ಮಡಿಲು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾದರು. ಮರಿ ಮಡಿಲು ಸೇರುತ್ತಿದ್ದಂತೆಯೇ ತಾಯಿ ಮತ್ತು ಮರಿಯಾನೆ ಹರ್ಷದಿಂದಲೇ ಅರಣ್ಯದತ್ತ ಹೆಜ್ಜೆ ಹಾಕಿದವು.

Key words: mysore-elephant-forest-department