‘ಸಾರಾ’ ಮತ್ತು ‘ವಿಶ್ವ’ ವಾರ್:  ಗುರುವಾರ ಚಾಮುಂಡಿ ಬೆಟ್ಟದಲ್ಲಿ  ಕ್ಲೈಮ್ಯಾಕ್ಸ್ …

ಮೈಸೂರು,ಅ,15,2019(www.justkannada.in)  ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.  ವಿಶ್ವನಾಥ್ 25 ಕೋಟಿಗೆ ಬಿಜೆಪಿಗೆ ಮಾರಾಟವಾದ್ರು ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಹಿರಂಗ ಸವಾಲು ಹಾಕಿದ್ದಾರೆ.

ಸಾ.ರಾ ಮಹೇಶ್ ನಿಮ್ಮ ಆರೋಪ ಹಿಟ್ ಅಂಡ್ ರನ್ ಆಗಬಾರದು. ನನ್ನನ್ನು ಕೊಂಡುಕೊಂಡವನ ಬಗ್ಗೆ ನಿಮಗೆ ಗೊತ್ತಿದೆ ಅಂದುಕೊಂಡಿದ್ದೇನೆ. ಗುರುವಾರ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ‌ ಇರುತ್ತೇನೆ. ಕೊಂಡುಕೊಂಡವನನ್ನು ನೀವು ಕರೆದುಕೊಂಡು ಬನ್ನಿ ನೋಡೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಹಿರಂಗ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿಗೆ ಮಾರಾಟವಾಗಿದ್ದಾರೆಂಬ ಸಾ.ರಾ ಮಹೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಇಂತಹ ಎಲ್ಲಾ ಹೇಳಿಕೆ ಕೇಳುತ್ತಿದ್ದರೇ ಮನಸ್ಸಿಗೆ ವ್ಯಥೆ ಆಗುತ್ತೆ. ನಾನೊಬ್ಬ ರೈತನ ಮಗ, ನನ್ನ ಬಳಿ ಏನೂ ಇಲ್ಲ. ಇದು ಹಿಟ್ ಅಂಡ್ ರನ್ ಆಗಬಾರದು ಸಾರಾ.ಮಹೇಶ್. ಗುರುವಾರ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ‌ ಇರುತ್ತೇನೆ.  ನನ್ನನ್ನ ಕೊಂಡುಕೊಂಡಿರುವವರನ್ನು ಕರೆದುಕೊಂಡು ಬರಬೇಕು. ನಾನು ಪೊಲೀಸರಿಗೆ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಬರುತ್ತೇನೆ. ಗುರುವಾರ ನೀವು ಅವನ ಜೊತೆ ಬರಲಿಲ್ಲ ಅಂದರೆ ನೀವು ಸುಳ್ಳ ಆಗುತ್ತೀರಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.

ಈ ವ್ಯವಸ್ಥೆಯಲ್ಲಿ ಪ್ರಮಾಣಿಕವಾಗಿ ಬದುಕಬೇಕು ಎಂದುಕೊಳ್ಳುವವರಲ್ಲಿ ನಾನೂ ಒಬ್ಬ. ನನ್ನ ಮನೆಯಲ್ಲಿ ನಾಲ್ಕು ಜನ ಹೆಚ್ಚು ಬಂದರೆ ಕೂರಲು ಸ್ಥಳವಿಲ್ಲ.  ಜಿಲ್ಲೆಯ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿತ್ತಿದೆ. ನಾನು ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ರೈತರು, ಉದ್ಯೋಗ ಸೇರಿದಂತೆ ಎಲ್ಲ ವಲಯವನ್ನು ಸಿದ್ದಗೊಳಿಸುತ್ತಿದ್ದೇವೆ. ಇದೆಲ್ಲ ರಿಯಲ್ ಎಸ್ಟೇಟ್ ಮಾಡುವವರಿಗೆ ಗೊತ್ತಾಗುವುದಿಲ್ಲ ಎಂದು ಸಾರಾ.ಮಹೇಶ್ ಗೆ ಹೆಚ್. ವಿಶ್ವನಾಥ್ ಟಾಂಗ್ ಕೊಟ್ಟರು.

ಹೆಚ್.ವಿಶ್ವನಾಥ್ ಬಿಜೆಪಿಗೆ ಮಾರಾಟವಾಗಿಲ್ಲ ಎನ್ನುವುದಾದರೇ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದ್ದರು.

Key words: mysore- Disqualified MLA-H.Vishwanath-challenge-former minister- sa.ra mahesh