ದಸರ ಕಾಮಗಾರಿ ಶುರು ಮಾಡಿ : ಗುತ್ತಿಗೆದಾರರ ಬಿಲ್ ಪಾವತಿಗೆ 10 ಕೋಟಿ ರೂ ಅನುದಾನ ಶೀಘ್ರ ಬಿಡುಗಡೆ: ಸಚಿವ ವಿ.ಸೋಮಣ್ಣ ಅಭಯ

 

ಮೈಸೂರು ಸೆ.8, 2019 ( www.justkannada.in news ):- ಮೈಸೂರು ಮಹಾನಗರಪಾಲಿಕೆ ಅಡಿಯಲ್ಲಿ ದಸರಾ ಹಾಗೂ ವಿವಿಧ ಕಾಮಗಾರಿಗಳಿಗೆ ಕೈಗೊಂಡ ಕೆಲಸಗಳ ಹಣ ಪಾವತಿ ಸಬಂಧ ಗುತ್ತಿಗೆದಾರರಿಗೆ ಈ ತಕ್ಷಣವೇ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಆಶ್ವಾಸನೆ ನೀಡಿದರು.

ಗುತ್ತಿಗೆದಾರರ ಕಾಮಗಾರಿಯ ಬಿಲ್ ಪಾವತಿ ಬಾಕಿ ಇದ್ದು, ಈ ಕೂಡಲೇ ಬಿಲ್ ಪಾವತಿಸಲು 10 ಕೋಟಿ ರೂ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ತಿಳಿಸಿದರು.

ಮೈಸೂರು ಮಹಾನಗರಪಾಲಿಕೆಯಲ್ಲಿ ಇಂದು ನಡೆದ ಗುತ್ತಿಗೆದಾರರ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋಮಣ್ಣ ಹೇಳಿದಿಷ್ಟು…

ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ 10 ಕೋಟಿ ರೂಗಳನ್ನು ಬಿಡುಗಡೆ ಮಾಡಿಸಲಾಗುವುದು. ಗುತ್ತಿಗೆದಾರರ ಬಿಲ್‍ಗಳನ್ನು ಶೀಘ್ರದಲ್ಲೇ ಪಾವತಿಸಲು ಕ್ರಮ ವಹಿಸಲಾಗುವುದು. ಈ ಬಾರಿಯ ದಸರಾ ಕಾಮಗಾರಿಗಳನ್ನು ಪ್ರಾರಂಭಿಸಿ ಯಾವುದೇ ತೊಂದರೆಯಾಗದಂತೆ ಮುಗಿಸಿ ವಿಶ್ವವಿಖ್ಯಾತಿ ದಸರಾವನ್ನು ಆಚರಿಸಲು ಸಹಕರಿಸುವಂತೆ ವಿನಂತಿಸಿದರು.
ನಗರಕ್ಕೆ ಬೇಕಾದ ಮೂಲ ಸೌಕರ್ಯಗಳ ನೀಡುವುದರಲ್ಲಿ ಗುತ್ತಿಗೆದಾರರ ಪಾತ್ರ ಮುಖ್ಯವಾಗಿದೆ. ಮೈಸೂರು ನಗರ ಸ್ವಚ್ಛತೆಯಿಂದ ಇರಬೇಕಾದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಸಮನ್ವಯತೆ ಇರಬೇಕು. ಮೈಸೂರಿನ ಹೊರ ವರ್ತುಲ ರಸ್ತೆಯ ಎರಡು ಬದಿಯ ಡ್ರೈನೇಜ್ ಸ್ವಚ್ಛತೆಮಾಡಬೇಕು ರಸ್ತೆ ಬದಿಯ ಪಾರ್ಥೇನಿಯಂ ಗಿಡಗಳನ್ನು ತೆಗೆಯಬೇಕು. ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೈಸೂರಿನ ಸ್ವಚ್ಛತೆ ಆಕರ್ಷಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪಾಲಿಕೆ ವತಿಯಿಂದ ಹಲವು ಬಿಲ್ ಗಳು ಪಾವತಿಯಾಗಿಲ್ಲ, ಗುತ್ತಿಗೆದಾರರು ಸಂಕಷ್ಟದಲಿದ್ದಾರೆ ಎಂದು ಹೇಳಿದರು. ಇದಕ್ಕೆ ಸಚಿವರು ಸ್ಪಂದಿಸಿ ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆ ಮಾಡಿಸಿಕೊಡುವ ಭರವಸೆಯನ್ನು ನೀಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ ರಾಮದಾಸ್, ಎಲ್.ನಾಗೇಂದ್ರ, ಮೈಸೂರು ಮಹಾನಗರ ಮಹಾಪೌರರಾದ ಪುಷ್ಪಲತಾ ಜಗನ್ನಾಥ, ಉಪಮಹಪೌರರಾದ ಶಫೀ ಅಹಮದ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್ ಕಾಂತರಾಜು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

——

key words : mysore-dasara-tender-amount-grants-v.somanna-mcc