ಮೈಸೂರು ದಸರಾ ಮಹೋತ್ಸವ-2019: ನಾಳೆ(ಆ.22) ಗಜಪಯಣಕ್ಕೆ ಚಾಲನೆ….

ಮೈಸೂರು,ಆ,21,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ -2019ರಲ್ಲಿ ಪಾಲ್ಗೊಳ್ಳಲು ಗಜಪಡೆ ಆಗಮಿಸಲಿದ್ದು ನಾಳೆ ಗಜಪಯಣಕ್ಕೆ ಚಾಲನೆ ಸಿಗಲಿದೆ.

ಮೈಸೂರು ದಸರಾ ಅಂಗವಾಗಿ ಆಗಸ್ಟ್ 22 ರಂದು ಬೆಳಿಗ್ಗೆ 11 ಗಂಟೆಗೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವನ್ಯ ಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ತಿಳಿಸಿದ್ದಾರೆ.

ದಸರಾ ಮಹೋತ್ಸವದಲ್ಲಿ ನಾಗರಹೊಳೆ ಹುಲಿ ಯೋಜನೆ ವಿಭಾಗದ ಬಳ್ಳೆ ಆನೆ ಶಿಬಿರದ 59 ವರ್ಷದ ಅರ್ಜುನ, ಮತ್ತಿಗೋಡು ಆನೆ ಶಿಬಿರದ 61 ವರ್ಷದ ಬಲರಾಮ, 53 ವರ್ಷದ ಅಭಿಮನ್ಯು, 63 ವರ್ಷದ ವರಲಕ್ಷ್ಮಿ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ 41 ವರ್ಷದ ಕಾವೇರಿ, 62 ವರ್ಷದ ವಿಜಯ, 46 ವರ್ಷದ ವಿಕ್ರಮ, 37 ವರ್ಷದ ಗೋಪಿ, 36 ವರ್ಷದ ಧನಂಜಯ, 49 ವರ್ಷದ ಈಶ್ವರ, ಬಿ.ಆರ್.ಟಿ ವಿಭಾಗದ ಕೆ.ಗುಡಿ ಆನೆ ಶಿಬಿರದ 52 ವರ್ಷದ ದುರ್ಗಪರಮೇಶ್ವರಿ, ಬಂಡೀಪುರ ವಿಭಾಗ ರಾಮ್‍ಪುರ ಆನೆ ಶಿಬಿರದ 57 ವರ್ಷದ ಜಯಪ್ರಕಾಶ್ ಪಾಲ್ಗೊಳಲಿದೆ.

ಹೆಚ್ಚುವರಿಯಾಗಿ ಬಂಡೀಪುರ ವಿಭಾಗದ ರಾಮ್‍ ಪುರ ಆನೆ ಶಿಬಿರದ 17 ವರ್ಷದ ಲಕ್ಷ್ಮಿ ಹಾಗೂ 19 ವರ್ಷದ ರೋಹಿತ್ ಒಟ್ಟು 14 ಆನೆಗಳು ಪಾಲ್ಗೊಳ್ಳಲಿವೆ.  ಆಗಸ್ಟ್ 22 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮದಲ್ಲಿ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಪಾಲ್ಗೊಳ್ಳಲಿವೆ ಎಂದು ಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore Dasara -2019-Gajapayana- tomorrow