MYSORE CRIME NEWS : ಜೂಜಾಡುತ್ತಿದ್ದ ೩೨ ಜನರ ಬಂಧನ, ೧೭ ಲಕ್ಷ ರೂ.ವಶ.

 

ಮೈಸೂರು, ಅ.23, 2022 : (www.justkannada.in news) ನಗರದ ಪ್ರತಿಷ್ಠಿತ ಬಡಾವಣೆಯ ಗ್ಯಾರೇಜ್‌ವೊಂದರ ಹಿಂಭಾಗದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ವಿಜಯನಗರ ಠಾಣೆ ಮತ್ತು ಸಿಸಿಬಿ ಪೊಲೀಸರು ೩೨ ಜನರನ್ನು ಬಂಧಿಸಿ,೧೭.೨೪ ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಹಿನಕಲ್ ಗ್ರಾಮದ ಯಶಸ್ವಿನಿ ಕಲ್ಯಾಣಮಂಟಪದ ಬಳಿಯ ಆದಿತ್ಯ ಬಡಾವಣೆಯ ಗ್ಯಾರೇಜ್ ಹಿಂಭಾಗದ ಕೊಠಡಿಯಲ್ಲಿ ಜೂಜಾಡುತ್ತಿರುವ ಬಗ್ಗೆ ವಿಜಯನಗರ ಪೊಲೀಸರಿಗೆ ಮಾಹಿತಿ ದೊರೆತಿದೆ. ತಕ್ಷಣವೇ ವಿಜಯನಗರ ಠಾಣೆ ಪೊಲೀಸರು ಮತ್ತು ಅಪರಾಧ ವಿಭಾಗ ಘಟಕದ ಪೊಲೀಸರು ರಾತ್ರಿ ಜೂಜು ಅಡ್ಡೆಯ ಮೇಲೆ ದಿಢೀರ್ ಜಂಟಿ ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದ ೩೨ ಜನರನ್ನು ಬಂಧಿಸಿದರು. ಜೂಜಾಟಕ್ಕೆ ಪಣಕ್ಕಿಡಲಾಗಿದ್ದ ೧೭.೨೪ ಲಕ್ಷ ರೂ.ನಗದು, ಹಣವನ್ನು ಎಣಿಸುವ ಯಂತ್ರವನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ಅಪರಾಧ ಮತ್ತು ಸಂಚಾರವಿಭಾಗದ ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ರವಿಶಂಕರ್, ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಜಿ.ಶೇಖರ್ ಸೇರಿದಂತೆ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

key words : mysore-police-gambling-arrested