ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ದಿ ಹೇಳಿದ ಪೊಲೀಸ್ ಮೇಲೆ ಹಲ್ಲೆ.

ಮೈಸೂರು, ಸೆಪ್ಟಂಬರ್,27,2021(www.justkannada.in): ಪಾರ್ಕ್ ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ದಿ ಹೇಳಿದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಇಬ್ಬರು ಕಿಡಿಗೇಡಿ ಯುವಕರು ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸಿದ್ದಾರ್ಥನಗರದ ಪಾರ್ಕ್ ವೊಂದರಲ್ಲಿ ಈ ಘಟನೆ ನಡೆದಿದೆ. ನಜರ್ ಬಾದ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್  ಮುರುಳೀಧರ್ ಹಲ್ಲೆಗೊಳಗಾದವರು. ಪಾರ್ಕ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಇಬ್ಬರು ಯುವಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಮುರುಳೀಧರ್ ಬುದ್ದಿ ಹೇಳಿದ್ದರು. ಈ ವೇಳೆ ಇಬ್ಬರು ಯುವಕರು ಪೊಲೀಸ್  ಕಾನ್ಸ್ ಟೇಬಲ್ ಮುರುಳೀಧರ್ ಅವರನ್ನ ಗುರಾಯಿಸಿಕೊಂಡು ಹೋಗಿದ್ದರು.

ಈ ಮಧ್ಯೆ ಮುರುಳೀಧರ್ ಅವರು ಸ್ಥಳದಲ್ಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ. ಬೈಕ್ ನಲ್ಲಿ ವೇಗವಾಗಿ ಬಂದು ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಹಲ್ಲೆಗೊಳಗಾಗಿ ಗಾಯಗೊಂಡ ಪೊಲೀಸ್  ಕಾನ್ಸ್ ಟೇಬಲ್ ಮುರುಳೀಧರ್ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರಗಳ್ಳತನ ಹೆಚ್ಚಾಗಿದ್ದರಿಂದ ಪೊಲೀಸರು ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆಯಾಗಿದೆ.   ಸದ್ಯ ಮೈಸೂರಿನಲ್ಲಿ ಕ್ರೈಂ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.

Key words: mysore-Attack – police -advised – not – urinate