ಕೊಲೆ ಪ್ರಯತ್ನ, ಆರೋಪಿತರಿಗೆ ಜೈಲುಶಿಕ್ಷೆ: ಹುಣಸೂರಿನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು

ಹುಣಸೂರು: ಕೊಲೆ ಪ್ರಯತ್ನ;ಆರೋಪಿತರಿಗೆ ಜೈಲುಶಿಕ್ಷೆ, ಹುಣಸೂರಿನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು.

ಪ್ರಕರಣದ ವಿವರ: ದಿನಾಂಕ 12-02-2013ರಂದು ರಾತ್ರಿ 9.30 ರ ಸಮಯದಲ್ಲಿ ಪಿರಿಯಾಪಟ್ಟಣ ನಿವಾಸಿಗಳಾದ ಭರತ್ ಕುಮಾರ್ ಮತ್ತು ಶರತ್‌ ಕುಮಾರ್‌ ಎನ್ನುವ ಸಹೋದರರು ಮದುವೆ ಮಂಟಪದಲ್ಲಿ ಹೂವಿನ ಆಲಂಕಾರದ ಕೆಲಸ ಮಾಡುತ್ತಿದ್ದು, ಅವರನ್ನು ಪಿರಿಯಾಪಟ್ಟಣದ ಗೋವಿಂದ ಅವರ ಮಗ ರಾಮು, ವೆಂಕಟಾಚಲ ಅವರ ಮಗ ಕಿರಣ್ ಹಾಗೂ ,ಉಸ್ಮಾನ್ ಅವರ ಮಗ ಅಭಿ @ ಸುಲೈಮಾನ್ ಅವರು ಪಿರ್ಯಾದುದಾರರ ಅಂಗಡಿಯ ಮುಂದೆ ಒಂದು ಆಟೋದಲ್ಲಿ ಬಂದು ಹಳೇ ದ್ವೇಷದಿಂದ ಭರತ್‌ ಕುಮಾರ್‌ ಮತ್ತು ಶರತ್‌ ಕುಮಾರ್‌ ರವರ ಕೊಲೆ ಮಾಡುವ ಉದ್ದೇಶದಿಂದ ಒಂದು ಕಬ್ಬಿಣದ ರಾಡನ್ನು ತೆಗೆದುಕೊಂಡು ಶರತ್ ಕುಮಾರ್ ರವರ ತಲೆಗೆ ಹೊಡೆಯಲು ಪ್ರಯತ್ನಿಸಿದ್ದು, ತಕ್ಷಣದಲ್ಲಿ ಸದರಿ ಶರತ್‌ಕುಮಾರ್‌ ತಪ್ಪಿಸಿಕೊಂಡಾಗ ಕಬ್ಬಿಣದ ರಾಡು ಶರತ್ ಕುಮಾರ್ ಅವರ ಬಲಭಾಗದ ದವಡೆಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡಿದ್ದು, ಅವರ 3 ಹಲ್ಲುಗಳು ಬಿದ್ದು ಹೋಗಿದ್ದು, ನಂತರ ಆರೋಪಿತರು, ಕಾಲು ಹಾಗೂ ಕೈಗಳಿಂದಲೂ ಸಹ ಶರತ್‌ಕುಮಾರ್‌ರವರಿಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಆಪಾದಿತರ ವಿರುದ್ಧ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲಿಸಿ ಪಿರಿಯಾಪಟ್ಟಣ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿತರಾದ ರಾಮು,ಕಿರಣ್ ಹಾಗೂ ಅಭಿ @ ಸುಲೈಮಾನ್ ವಿರುದ್ಧ ಹುಣಸೂರು ಪಟ್ಟಣದ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ರವರು ವಿಚಾರಣೆ ನಡೆಸಿ ಆರೋಪಿತರು ತಪ್ಪಿತಸ್ಥರೆಂದು ತೀರ್ಮಾನಿಸಿ, ಆರೋಪಿತರಿಗೆ ತಲಾ 5 ವರ್ಷಗಳ ಸದಾ ಸಜೆ ಮತ್ತು ತಲಾ ರೂ 35,000/- ದಂಡವನ್ನು ವಿಧಿಸಿ ಶುಕ್ರವಾರ ತೀರ್ಪು ನೀಡಿರುತ್ತಾರೆ. ದಂಡದ ಹಣದಲ್ಲಿ ರೂ. 105,000/-ಹಣವನ್ನು ಗಾಯಾಳುವಾದ ಶರತ್‌ ಕುಮಾರ್‌ರವರಿಗೆ ಪರಿಹಾರದ ರೂಪದಲ್ಲಿ ಪಾವತಿಸಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ.ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.