ಸ್ನೇಹಿತನ ಹುಟ್ಟು ಹಬ್ಬಕ್ಕೆಂದು ಬಂದು ಆತನನ್ನೇ ಚಾಕುವಿನಿಂದ ಇರಿದು ಕೊಂದ ಗೆಳೆಯರು

ಮುಂಬೈ:ಜುಲೈ-29:(www.justkannada.in) ತನ್ನ 32ನೇ ವರ್ಷ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಉದ್ಯಾನವನವೊಂದರಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಗೆಳೆಯರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ನಿವಾಸಿ ನಿತೇಶ್​ ಸಾವಂತ್ ಮೃತ ವ್ಯಕ್ತಿ. ಮುಂಬೈನ ಘಾಟ್ಕೋಪರ್​ ಬಡಾವಣೆಯ ನಿವಾಸಿಯಾಗಿದ್ದ ನಿತೇಶ್, ಭಾನುವಾರ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಈ ಹಿನ್ನಲೆಯಲ್ಲಿ ಘಾಟ್ಕೋಪರ್​ನ ಪಂತ್​ ನಗರದಲ್ಲಿರುವ ಉದ್ಯಾನವೊಂದರಲ್ಲಿ ಪಾರ್ಟಿ ಆಯೋಜಿಸಿದ್ದ. ತನ್ನ ಸ್ನೇಹಿತರನ್ನೂ ಆಹ್ವಾನಿಸಿದ್ದ.

ಪಾರ್ಟಿಗೆ ಬಂದ ಸ್ನೇಹಿತರು ಚೆನ್ನಾಗಿಯೇ ಮಾತನಾಡುತ್ತಾ, ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಈ ಹಿಂದೊಮ್ಮೆ ನಡೆದ ಜಗಳದ ಬಗ್ಗೆ ಪ್ರಸ್ತಾಪವಾಗಿದೆ. ಈ ಜಗಳಕ್ಕೆ ನಿತೇಶ್​ ಸಾವಂತ್​ ಕಾರಣ ಎಂದು ನಿರ್ಧರಿಸಿ ಆತನನ್ನು ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣ ಆತನನ್ನು ಹಲವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಿತೇಶ್ ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಾಟ್ಕೋಪರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸ್ನೇಹಿತನ ಹುಟ್ಟು ಹಬ್ಬಕ್ಕೆಂದು ಬಂದು ಆತನನ್ನೇ ಚಾಕುವಿನಿಂದ ಇರಿದು ಕೊಂದ ಗೆಳೆಯರು
Mumbai man killed by friends while celebrating his birthday in a park