ಮೋದಿಯವರದ್ದು ಅಕ್ಕಿ, ಸಿದ‍್ಧರಾಮಯ್ಯನವರದ್ದು ಚೀಲ: ನಿಮ್ಮ ಮೋಸದ ಮಾತಿಗೆ ಜನ ಮರುಳಾಗಲ್ಲ-ಸಿಎಂ ಬೊಮ್ಮಾಯಿ ಟೀಕೆ.

ಕೊಪ್ಪಳ,ಡಿಸೆಂಬರ್,15,2022(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಆದರೆ   ಪ್ರಧಾನಿ ಮೊದಿಯವರದ್ದು ಅಕ್ಕಿ, ಸಿದ್ದರಾಮಯ್ಯನದ್ದು ಚೀಲ. ನಿಮ್ಮ ಮೋಸದ ಮಾತಿಗೆ ಜನ ಮರುಳಾಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಕೊಪ್ಪಳದಲ್ಲಿ ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮೋಸ, ಸುಳ್ಳು, ವಂಚನೆ ಮಾಡುತ್ತಿರುವುದೇ ಕಾಂಗ್ರೆಸ್.  ಸುಳ್ಳು ಹೇಳುವ ಕಾಂಗ್ರೆಸ್ ನಂಬಬೇಡಿ. ಕಾಂಗ್ರೆಸ್ ಗೆ ಮನೆಯೂ ಇಲ್ಲ ಮನೆ ಬಾಗಿಲು ಇಲ್ಲ.  ಕಾಂಗ್ರೆಸ್ ನಾಟಕ ಬಟಾಬಯಲಾಗಿದೆ. ಕಾಂಗ್ರೆಸ್ ನಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು. ನಾವು ಜನಮನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದರು.

ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಹೊಗಳಿದ ಸಿಎಂ ಬೊಮ್ಮಾಯಿ, ಬಿಎಸ್ ವೈ. ರೈತಪರ ಹೋರಾಟಗಾರ, ಅಭಿವೃದ್ಧಿ ಹರಿಕಾರ.  ಹಳ್ಳಿ ಹಳ್ಳಿಗಳಲ್ಲೂ ಬಿಜೆಪಿ ಪರ ರೈತರು ನಿಲ್ಲಲು ಬಿಎಸ್ ವೈ ಕಾರಣ.  35 ವರ್ಷಗಳಲ್ಲಿ ಬಿಜೆಪಿ ಹಂತ ಹಂತವಾಗಿ ಬೆಳೆದು ಬಂದಿದೆ. ಅದಕ್ಕೆ ಬಿಎಸ್ ವೈ ಪರಿಶ್ರಮ ಮರೆಯುವಂತಿಲ್ಲ ಎಂದು ಗುಣಗಾನ ಮಾಡಿದರು.

Key words: Modi’s -rice, Siddaramaiah’s –bag-annabagya-CM Bommai-critisize