ಫೋನ್ ಕದ್ದಾಲಿಕೆಯ ಬಾಂಬ್ ಸಿಡಿಸಿದ ಶಾಸಕ ಅರವಿಂದ ಬೆಲ್ಲದ್.  

ಬೆಂಗಳೂರು,ಜೂನ್,17,2021(www.justkannada.in): ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯುವ ವಿಚಾರದಲ್ಲಿ ಪರ ಮತ್ತು ವಿರೋಧಗಳು ಚರ್ಚೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಭಿನ್ನಮತ ಶಮನಕ್ಕಾಗಿ ಅಖಾಡಕ್ಕೆ ಇಳಿದಿದ್ದು ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ.jk

ರಾಜ್ಯ ರಾಜಕಾರಣದಲ್ಲಿ ಏರುಪೇರು ಉಂಟಾಗುವ ವೇಳೆಯಲ್ಲಿಯೇ ದೆಹಲಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಶಾಸಕ ಅರವಿಂದ್​ ಬೆಲ್ಲದ್​ ಇದೀಗ ಫೋನ್  ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

ಕುಮಾರಕೃಪಾ ಗೆಸ್ಟ್​ಹೌಸ್​ ಬಳಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಕಳೆದ ಒಂದು ತಿಂಗಳಿನಿಂದ ನನ್ನ ಫೋನ್​ ಟ್ಯಾಪ್ ಆಗುತ್ತಿದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನನಗೇಕೋ ಈ ಕರೆ ಸರಿ ಎನಿಸದ ಕಾರಣ ನಾನು ಕರೆಯನ್ನ ಕಟ್​ ಮಾಡಿದೆ.

ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ನನ್ನ ಮೊಬೈಲ್ ​ಗೆ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ, ನನ್ನನ್ನ ಅನವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನನಗೆ ಸಹಾಯ ಮಾಡಿ ಎಂದಿದ್ದರು.  ಆದರೆ ಈ  ಕರೆಯ ಹಿಂದೆ ನನ್ನ ವಿರುದ್ಧ ದೊಡ್ಡ ಪಿತೂರಿಯೇ ಇದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.

Key words: MLA -Aravind Bellad- phone tapping- bomb