ತಿ.ನರಸೀಪುರ ಇಂದಿರಾ ಕ್ಯಾಂಟೀನ್ ಗೆ ಸಚಿವ ಸೋಮಶೇಖರ್ ಭೇಟಿ

* ಸ್ವಚ್ಛತೆ, ಗುಣಮಟ್ಟ, ಅಡುಗೆ ತಯಾರಿಕೆಯನ್ನು ಪರಿಶೀಲಿಸಿದ ಸಚಿವ ಎಸ್ ಟಿ ಎಸ್

* ಇಂದಿರಾ ಕ್ಯಾಂಟೀನ್ ನಲ್ಲಿಯೇ ಚಿತ್ರಾನ್ನ ಸವಿದ ಸಚಿವರಾದ ಸೋಮಶೇಖರ್

ಮೈಸೂರು, ಮೇ 30,2021 (www.justkannada.in): ತಿ.ನರಸೀಪುರದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು, ಸ್ವಚ್ಛತೆ ಹಾಗೂ ಅಡುಗೆ ತಯಾರಿಕಾ ವ್ಯವಸ್ಥೆಯನ್ನು ಖುದ್ದು ಪರಿಶೀಲನೆ ನಡೆಸಿದರು.

ಇಂದಿರಾ ಕ್ಯಾಂಟೀನ್ ನಲ್ಲಿಯೇ ಚಿತ್ರಾನ್ನ ಸೇವಿಸಿದ ಸಚಿವರಾದ ಸೋಮಶೇಖರ್ ಅವರು, ಗುಣಮಟ್ಟದ ವ್ಯವಸ್ಥೆಗೆ ಮೆಚ್ಚುಗೆಯನ್ನು ಸೂಚಿಸಿದರು. ಪ್ರತಿದಿನ ಬೆಳಗ್ಗೆ 200 ಮಂದಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 200 ಮಂದಿಗೆ ಆಗುವಷ್ಟು ಊಟವನ್ನು ಇಲ್ಲಿ ಸಿದ್ಧಪಡಿಸುವ ಬಗ್ಗೆ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂದಿರಾ ಕ್ಯಾಂಟಿನ್ ನಲ್ಲಿ ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಸ್ವತಃ ನಾನು ತಿಂಡಿಯನ್ನು ಸೇವಿಸುವ ಮೂಲಕ ಪರಿಶೀಲನೆ ನಡೆಸಿದ್ದು, ಶುಚಿಯಾಗಿ ಮತ್ತು ರುಚಿಯಾಗಿ ತಯಾರಿಸಲಾಗಿದೆ ಎಂದು ತಿಳಿಸಿದರು.

ಶಾಸಕರಾದ ಅಶ್ವಿನ್ ಕುಮಾರ್ ಹಾಗೂ ಸಂಸದರು, ಔಷಧ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಪ್ರತಾಪ್ ಸಿಂಹ ಅವರು, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ.ಯೋಗೀಶ್, ಉಪವಿಭಾಗಾಧಿಕಾರಿ ಡಾ. ಎನ್.ಸಿ. ವೆಂಕಟರಾಜು, ಡಿವೈಎಸ್‌ಪಿ ಗೋವಿಂದರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.