ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ, ಹಿಂಸಾಚಾರ ಗೋಧ್ರಾ ಹತ್ಯಾಕಾಂಡದಂತೆ ಕೊನೆಯಾಗಬಹುದು: ಸಚಿವ ಸಿ.ಟಿ.ರವಿ ಹೇಳಿಕೆಗೆ ಎಲ್ಲೆಡೆ ಆಕ್ರೋಶ

ಬೆಂಗಳೂರು, ಡಿಸೆಂಬರ್ 21, 2019 (www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಗೋಧ್ರಾ ಹತ್ಯಾಕಾಂಡದ ರೀತಿಯಲ್ಲಿ ಕೊನೆಯಾಗಬಹುದು ಎಂಬ ಸಚಿವ ಸಿ.ಟಿ.ರವಿ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಸಿಟಿ ರವಿ ಹೇಳಿಕೆಗೆ ನೀಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಮತ್ತು ಪ್ರತಿಪಕ್ಷ ನಾಯಕರು ಛೀಮಾರಿ ಹಾಕುತ್ತಿದ್ದಾರೆ. ಬಹುಸಂಖ್ಯಾತ ಮಂದಿ ತಾಳ್ಮೆ ಕಳೆದುಕೊಂಡಾಗ ಪರಿಸ್ಥಿತಿ ಏನಾಗುತ್ತದೆ ಎಂದು ನೀವು ಮರೆತುಹೋಗಿದ್ದರೆ ಗೋಧ್ರಾದಲ್ಲಿ ಏನಾಯಿತು ಎಂದು ನೆನಪಿಸಿಕೊಳ್ಳಿ. ಇಲ್ಲಿ ಕೂಡ ಅಂತಹದ್ದೇ ಮರುಕಳಿಸಬಹುದು, ಬಹುಸಂಖ್ಯಾತ ಮಂದಿಯ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಉದ್ರೇಕಗೊಳಿಸುವ ರೀತಿ ಹೇಳಿಕೆ ನೀಡಿದ್ದರು.

ಸಚಿವ ಸಿ ಟಿ ರವಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್, ಸಚಿವ ಸಿಟಿ ರವಿ ಪ್ರಚೋದನಕಾರಿಯಾಗಿ ಬೆದರಿಕೆಯೊಡ್ಡಿದ್ದಾರೆ. ಪೊಲೀಸರು ಅವರ ವಿರುದ್ಧ ಕೂಡಲೇ ಕೇಸು ದಾಖಲಿಸಿ ಬಂಧಿಸಬೇಕು. ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಅವರು ಈ ರೀತಿ ಮಾತನಾಡಬಾರದು ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಟೀಕೆ ವ್ಯಕ್ತವಾಗಿದೆ