ಸೆ.30 ರಂದು ಮೈಸೂರಿನಲ್ಲಿ ಮೆಗಾ ಲೋಕ್ ಅದಾಲತ್.

ಮೈಸೂರು,ಸೆಪ್ಟಂಬರ್,8,2021(www.justkannada.in): ಸೆಪ್ಟಂಬರ್ 30 ರಂದು ಮೈಸೂರಿನಲ್ಲಿ ಮೆಗಾ ಲೋಕ್ ಆದಾಲತ್ ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ  ಬಾಕಿ ಇರುವ ಪ್ರಕರಣಗಳ ರಾಜಿ ಸಂಧಾನ ಮಾಡಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಎಲ್.ರಘುನಾಥ್, ನೇರ ಮತ್ತು ವರ್ಚುವಲ್ ಮೂಲಕ ಲೋಕ್ ಆದಾಲತ್ ನಡೆಯಲಿದ್ದು ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನ ಇತ್ಯರ್ಥಪಡಿಸಲಾಗುತ್ತದೆ. ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ 1,16,664 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಅವುಗಳ ಪೈಕಿ 54,882  ಸಿವಿಲ್ ಮತ್ತು 61,762 ಕ್ರಿಮಿನಲ್ ಪ್ರಕರಣಗಳಿವೆ. ಇವುಗಳಲ್ಲಿ ರಾಜಿ ಸಾಧ್ಯತೆ ಇರುವ ಪ್ರಕರಣಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. 7,739 ಪ್ರಕರಣಗಳನ್ನು ರಾಜಿ ಇತ್ಯರ್ಥಕ್ಕೆ ಗುರುತಿಸಲಾಗಿದೆ. ಮೋಟಾರು ವಾಹನ ಅಪಘಾತ 2,733 ಪ್ರಕರಣ ಇದೆ ಎಂದು ಮಾಹಿತಿ ನೀಡಿದರು.

ಪ್ರಕರಣ ರಾಜಿಯಾದಲ್ಲಿ ಶೇ.100 ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಲೋಕಾ ಅದಾಲತ್ ಆವಾರ್ಡ್ (ಆದೇಶ) ವಿರುದ್ಧ  ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘುನಾಥ್  ಹೇಳಿದರು.

Key words: Mega Lok Adalat – Mysore -September -30th.