‘ಕಮಲ’ ಕಾರ್ಯಕರ್ತರ ಸಭೆಯಲ್ಲಿ ಭಾಗಿ: ಬಿಜೆಪಿ ಸೇರ್ಪಡೆ ಬಗ್ಗೆ  ಸಂಸದೆ ಸುಮಲತಾ ಅಂಬರೀಶ್ ಏನಂದ್ರು ಗೊತ್ತೆ…?

ಮಂಡ್ಯ,ಅ,9,2019(www.justkannada.in):  ಬಿಜೆಪಿ ಸೇರುವುದಾದರೇ ಅದನ್ನ ಗೌಪ್ಯವಾಗಿ ಇಡಲು ಸಾಧ್ಯವೇ…? ನಾನು ಬಿಜೆಪಿ ಸೇರುವುದಾದರೇ  ಎಲ್ಲರಿಗೂ ಹೇಳಿಯೇ ಸೇರುತ್ತೇನೆ ಎಂದು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಇಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪಾಲ್ಗೊಂಡಿದ್ದರು. ಸಭೆ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮಂದಿ ನನ್ನ ಪರವಾಗಿ ಕೆಲಸ ಮಾಡಿದ್ದರು. ಹೀಗಾಗಿ ಈ ಹಿಂದೆ ನಾಲ್ಕೈದು ಬಾರಿ ಸಭೆಗೆ ಬರಬೇಕಿತ್ತು. ಆದರೆ ಇವತ್ತು ಕಾರ್ಯಕರ್ತರಿಗೆ ಕೃತಜ್ಞತೆ ಹೇಳಲು ಸಭೆಗೆ ಬಂದಿದ್ದೆ. ನಾನು ಬಿಜೆಪಿ ಸೇರೋದಾದರೇ ಎಲ್ಲರಿಗೂ ಹೇಳಿಯೇ ಸೇರುತ್ತೇನೆ ಎಂದರು.

ಜೋಡೆತ್ತುಗಳು ಈಗ ಎಲ್ಲಿಗೆ ಹೋಗಿವೆ ಎಂಬ ಟೀಕೆ ಕುರಿತು ಟಾಂಗ್ ಕೊಟ್ಟ ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್ ನವರೇ 8 ಮಂದಿ ಶಾಸಕರಿದ್ದಾರೆ. ಅವರು ಅಧಿಕಾರದಲ್ಲಿರುವವರನ್ನ ಒತ್ತಾಯಿಸಬೇಕು. ಅದನ್ನ ಬಿಟ್ಟು ಜೋಡೆತ್ತುಗಳ ಬಗ್ಗೆ ಟೀಕೆ ಮಾಡುವುದೇಕೆ ಎಂದು ಪ್ರಶ್ನಿಸಿದರು.

ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು….

ಫಾರಿನ್ ಟೂರ್ ನಲ್ಲಿದ್ದಾರೆಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಂಸದೆ ಸುಮಲತಾ ಅಂಬರೀಶ್,  ಫಾರಿನ್ ಟೂರ್ ಗೆ ಯಾರು ಹೋಗಿದ್ದರು ಎಂಬುದಕ್ಕೆ ಫೋಟೊ ಇದೆ.  ಹೊರದೇಶದಲ್ಲಿ ಯಾರ್ಯಾರು  ಹೇಗಿದ್ದರು ಎಂಬುದು ಬಹಿರಂಗಗೊಂಡಿದೆ ಎಂದು ಲೇವಡಿ ಮಾಡಿದರು.

ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಸಿದ ಅವರು, ಈ ಬಗ್ಗೆ ಕಾಲ ಬಂದಾಗ ನೋಡೋಣ ಎಂದರು.

Key words:  mandya- MP-Sumalatha Ambarish – about –BJP-joining