ಕೋಲು ನೀವು ಹಿಡಿಯಬೇಕಾಗಿಲ್ಲ, ಜನರೇ ಹಿಡಿಸುತ್ತಾರೆ: ನಿಮ್ಮ ‘ಕೊನೆ’ ಚುನಾವಣೆಯಲ್ಲಿ ಸೋಲು ಶತಸಿದ್ಧ: ಸಿದ್ಧರಾಮಯ್ಯಗೆ ಬಿಜೆಪಿ ಟಾಂಗ್.

ಬೆಂಗಳೂರು,ಜುಲೈ,9,2022(www.justkannada.in): ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ.  ಇದು ನನ್ನ ಕೊನೆ ಚುನಾವಣೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಟಾಂಗ್ ನೀಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಿದ್ದರಾಮಯ್ಯ ಅವರದ್ದು ಅದೇ ರಾಗ, ಅದೇ ಹಾಡು. ಇದೇ ನನ್ನ ಕೊನೆಯ ಚುನಾವಣೆ ಎನ್ನುವುದು ಅಭ್ಯಾಸವಾಗಿ ಬಿಟ್ಟಿದೆ. ಹೀಗೇ ಹೇಳುತ್ತಿರಿ, ಜನರೇ ನಿಮ್ಮ ರಾಜಕೀಯಕ್ಕೆ ಅಂತ್ಯ ಹಾಡುತ್ತಾರೆ. ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಜೀವದಾನ ಪಡೆದಿರಿ. ಮುಂದೆ ನಿಮ್ಮವರೂ ನಿಮ್ಮನ್ನು ಕಾಪಾಡಲಾರರು ಎಂದು ಕುಟಕುಕಿದೆ.

ಸಿದ್ದರಾಮಯ್ಯನವರೇ ಈ ಬಾರಿ ನೀವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ಇದೇ ನಿಮ್ಮ ಕೊನೆಯ ಚುನಾವಣೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೆ ನಿಮ್ಮ ಸೋಲಿಗೆ ಯೋಗದಾನ ನೀಡುವವರು ನಿಮ್ಮ ಪಕ್ಷದಲ್ಲೇ ಇದ್ದಾರೆ ಎಂಬುದನ್ನು ಮರೆಯಬೇಡಿ.

ಕೋಲು ನೀವು ಹಿಡಿಯಬೇಕಾಗಿಲ್ಲ, ಜನರೇ ಹಿಡಿಸುತ್ತಾರೆ. ಅದಕ್ಕಾಗಿ 2023 ರವರೆಗೆ ಕಾಯಬೇಡಿ. ಈಗಲೇ ಕೋಲು ಹುಡುಕಿಕೊಳ್ಳಿ. ನಿಮ್ಮದೇ ಪಕ್ಷದ ನಾಯಕರು ಹಾಗೂ ಮತದಾರರು ನಿಮ್ಮ ಕೈ ಹಿಡಿಯುವುದಿಲ್ಲ. ಅಂತಿಮವಾಗಿ ನಿಮ್ಮ ಬಳಿ ಉಳಿಯುವುದು ಕೋಲಷ್ಟೇ! ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯನವರ ಬಗಲಲ್ಲೇ ಶತ್ರುಗಳಿದ್ದಾರೆ. ಪರಮೇಶ್ವರ  ಡಿಕೆಶಿ ,ಮುನಿಯಪ್ಪ, ಖರ್ಗೆ, ದೇಶಪಾಂಡೆ , ಶ್ಯಾಮನೂರು ಶಿವಶಂಕರಪ್ಪ ಪಟ್ಟಿ ದೊಡ್ಡದಿದೆ. ನಿಮ್ಮ‌ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ.

ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ. ಸಿದ್ದರಾಮಯ್ಯನವರೇ, ಮುಂದೆ ನೀವು ಚುನಾವಣೆಗೆ ನಿಲ್ಲಬಹುದು ಆದರೆ ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ. ನಿಮ್ಮ ‘ಕೊನೆಯ’ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇದು ನಮ್ಮ ಮಾತಲ್ಲ,‌ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ ಎಂದು ರಾಜ್ಯ ಬಿಜೆಪಿ ಹೇಳಿದೆ.

Key words: last-election-siddaramaiah-bjp-tong