ಪತ್ರಿಕೆಗಳ ಜಾಹೀರಾತು ದರ ಪರಿಷ್ಕರಣೆ ಮಾಡುವಂತೆ  ಶಿವಾನಂದ ತಗಡೂರು ಮನವಿ.

ಬೆಂಗಳೂರು,ಜೂನ್,12,2021(www.justkannada.in): ಪತ್ರಿಕೆಗಳ ಜಾಹೀರಾತು ದರ ಪರಿಷ್ಕರಣೆ ಮಾಡುವಂತೆ  ಸರ್ಕಾರಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.

ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶಿವಾನಂದ ತಗಡೂರು, ಜಾಹೀರಾತು ನೀತಿಯ ಪ್ರಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ಜಾಹೀರಾತು ದರಗಳು ಪರಿಷ್ಕರಣೆ ಮಾಡಬೇಕು. ಆದರೆ, ಮೂರು ವರ್ಷ ಕಳೆದರೂ ದರಗಳು ಪರಿಷ್ಕರಣೆ ಆಗಲಿಲ್ಲ. ಈ ಬಗ್ಗೆ ಮನವಿ ನೀಡಿ ತಮ್ಮ ಗಮನ ಸೆಳೆಯಲಾಗಿತ್ತು. ಆದರೂ ಈ ನಿಟ್ಟಿನಲ್ಲಿ ಕ್ರಮ ಆಗಲಿಲ್ಲ.

ಪತ್ರಿಕೆಗಳಿಗೆ ಜಾಹೀರಾತುಗಳೇ ಆದಾಯ ಮೂಲ ಎನ್ನುವುದು ತಮಗೂ ತಿಳಿದ ಸಂಗತಿ. ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳ ತನಕ ಜಾಹೀರಾತು ಆದಾಯ ಮೂಲಗಳು ಸೊರಗಿ ಹೋಗಿವೆ. ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳು ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ತಮಗೆ ಮಾಹಿತಿ ನೀಡಲಾಗಿದೆ. ಈಗಲಾದರೂ ವಾಸ್ತವ ಗಮನಿಸಿ, ಆದ್ಯತೆ ಮೇರೆಗೆ ಜಾಹೀರಾತು ದರಗಳನ್ನು ಕೂಡಲೇ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

Key words: KUWJ-President- Shivananda Tagadur -appeals -revise – advertisement rate -newspapers.