KSOU : ಮನಿ ಲಾಂಡ್ರಿಂಗ್ ನ ಗಂಭೀರ ಆರೋಪ…?

ಬೆಂಗಳೂರು,ಜುಲೈ,23,2022(www.justkannadain): ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ  ಡಾ|| ಎಸ್‌.ವಿದ್ಯಾಶಂಕರ್‌  ನಿಯಮ ಮೀರಿ ವಿವಿಯ ಹಣ ದುರ್ಬಳಕೆ  ಹಾಗೂ ಹಣ ವರ್ಗಾವಣೆ (ಮನಿಲಾಂಡ್ರಿಂಗ್ ) ಸೇರಿ ಹಲವು ಅಕ್ರಮದಲ್ಲಿ ಭಾಗಿಯಾಗಿದ್ದು, ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ  ಹಾಗೂ ಮಾಜಿ ಎಂಎಲ್ ಸಿ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಮಾಜಿ ಎಂಎಲ್ ಸಿ ರಮೇಶ್ ಬಾಬು ಹೇಳಿದ್ದಿಷ್ಟು..

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯವು 1992ರ ಕಾಯಿದೆ ಅಡಿಯಲ್ಲಿ ರಚನೆಯಾಗಿದ್ದು, ಕಲಂ 4ರ ಅಡಿಯಲ್ಲಿ ತನ್ನ ಧೈಯೋದ್ದೇಶಗಳ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಈ ವಿಶ್ವ ವಿದ್ಯಾಲಯಕ್ಕೆ ರಾಜ್ಯಪಾಲರು ಕುಲಾಧಿಪತಿಗಳಾಗಿದ್ದು, ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿ ಡಾ|| ಅಶ್ವಥ್ ನಾರಾಯಣ್‌ ರವರು ಸಮ ಕುಲಾಧಿಪತಿಗಳಾಗಿದ್ದಾರೆ. ಡಾ|| ಎಸ್‌.ವಿದ್ಯಾಶಂಕರ್‌ ರವರು ಕುಲಪತಿಗಳಾಗಿದ್ದಾರೆ.

ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು ಉನ್ನತ ಶಿಕ್ಷಣ ಸಚಿವರು 31-08-2020ರಲ್ಲಿ ಶಿಫಾರಸ್ಸು ಮಾಡುವುದರ ಮೂಲಕ ಮುಕ್ತ ವಿಶ್ವ ವಿದ್ಯಾಲಯದ ಹಣವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿದ್ದರು. ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿಗಳು 17-08-2021ರಲ್ಲಿ ಸುಮಾರು 85 ಕೋಟಿ ರೂಪಾಯಿಗಳ ವಿಶ್ವ ವಿದ್ಯಾಲಯದ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಸಲು ಸಭೆಯ ಮೂಲಕ ಅನುಮತಿ ನೀಡಿದ್ದು, ಪರಿಷ್ಕೃತ ವೆಚ್ಚದಲ್ಲಿ ಇದು 94ಕೋಟಿ ರೂಪಾಯಿ ಆಗಿರುತ್ತದೆ. ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕಾಗಿ 25ಕೋಟಿ ರೂಪಾಯಿ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡಕ್ಕೆ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್‌ ಕಾಲೇಜ್ ನೌಕರರಾಗಿದ್ದ ಡಾ|| ವಿದ್ಯಾಶಂಕರ್‌ ರವರನ್ನು ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿಸಿ, ಇವರ ಮೇಲೆ ಅನೇಕ ಅಕ್ರಮದ ದೂರುಗಳು ಬಂದರೂ 06-04-2022ರಲ್ಲಿ ಇವರನ್ನು ಒಂದು ವರ್ಷದ ಅವಧಿಗೆ ಮುಂದುವರೆಸಲಾಗಿದೆ. ಇವರ ಮುಂದುವರಿಕೆಯ ಅಕ್ರಮದಲ್ಲಿ ಸಚಿವರು ಮತ್ತು ರಾಜ್ಯಪಾಲರ ಕಛೇರಿಯೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಹಕಾರ ಸಂಘಗಳ ನಿಯಮ 17ರ ಅಡಿಯಲ್ಲಿ ನೌಕರರ ನೇಮಕಾತಿಗೆ ಪೂರಕವಾಗಿ ನಡೆಸುವ ಪರೀಕ್ಷೆಯ ಮೇಲ್ವಿಚಾರಣೆಯನ್ನು ಪಡೆದುಕೊಂಡಿರುವ ಮುಕ್ತ ವಿಶ್ವವಿದ್ಯಾಲಯ, ಪರೀಕ್ಷೆಯಲ್ಲಿ ಒಎಮ್‌ ಆರ್ ಶೀಟ್‌ ಗಳನ್ನು ತಿದ್ದುವ ಮೂಲಕ ಇಡೀ ರಾಜ್ಯದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಪಿಎಸ್‌ ಐ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಅಭಿಯಂತರ ನೇಮಕಾತಿ ಹಾಗೂ ಇತರ ನೇಮಕಾತಿಗಳಿಗೆ ಮುನ್ನುಡಿಯನ್ನು ಬರೆದಿದೆ. ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘಗಳು, ರಾಜ್ಯ ಎಣ್ಣೆ ಬೀಜಕಾಳು ಸಹಕಾರ ಮಹಾಮಂಡಲ ಹಾಗೂ ಇನ್ನಿತರ ಸಹಕಾರಿ ಬ್ಯಾಂಕುಗಳು ಈ ವಿಶ್ವವಿದ್ಯಾಲಯದ ಮೂಲಕ ಪರೀಕ್ಷೆಗಳನ್ನು ನಡೆಸಿದ್ದು, ಎಲ್ಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ  ನಡೆದಿದೆ. 22-01-2022ರಲ್ಲಿ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್‌ ಅವರು ಬಮೂಲ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಆಕ್ರಮ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮೇ 2022ರಲ್ಲಿ ಸಚಿವರ ಮೌಖಿಕ ಸೂಚನೆಗಳಿಗೆ ಅನುಗುಣವಾಗಿ ಕುಲಪತಿಗಳು ಸುಮಾರು 80 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಅನುಮೋದನೆ ಮಾಡಿರುವುದಾಗಿ ಮಾಹಿತಿ ಇದೆ. ಯಾವುದೇ ವಿಶ್ವವಿದ್ಯಾಲಯ ರಾಜ್ಯ ಸರ್ಕಾರದ ರೀತಿಯಲ್ಲಿ ಅನುದಾನಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಸಚಿವರ ಪ್ರಭಾವದ ಕಾರಣಕ್ಕೆ ಈ ವಿಶ್ವವಿದ್ಯಾಲಯದ ಕುಲಪತಿಗಳು ನಿಯಮ ಮೀರಿ ಹಣ ದುರ್ಬಳಕೆ ಮಾಡಿದ್ದು, ಆದರ ಸಂಪೂರ್ಣ ತನಿಖೆ ಆಗಬೇಕಾಗಿದೆ. ಭೋದಕ ಮತ್ತು ಭೋದಕೇತರ ಸಿಬ್ಬಂದಿಗೆ ಮಾಸಿಕ ಅಂದಾಜು 6 ಕೋಟಿ ರೂಪಾಯಿಗಳ ವೇತನ ಪಾವತಿ ಮಾಡಬೇಕಾಗಿದ್ದು, ವಿದ್ಯಾರ್ಥಿಗಳ ಮೂಲಕ ವಾರ್ಷಿಕ ಸುಮಾರು 15-16 ಕೋಟಿ ಶುಲ್ಕ ಸಂಗ್ರಹವಾಗುತ್ತದೆ. ವಿಶ್ವವಿದ್ಯಾಲಯಕ್ಕೆ ಯಾವುದೇ ಆದಾಯದ ಮೂಲಗಳು ಇಲ್ಲದಿದ್ದರೂ, ಶಿಕ್ಷಣ ಸಚಿವರ ಕಾರಣಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಠೇವಣಿ ರೂಪದಲ್ಲಿರುವ ಹಣವನ್ನು ದುರ್ಬಳಕೆ ಮಾಡಿ ಅನುದಾನಗಳ ಮೂಲಕ ಹಂಚಲಾಗಿದೆ ಎಂದು ರಮೇಶ್ ಬಾಬು ದೂರಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಮುನ್ನೂರು ಮಂದಿ ಭೋದಕ ಮತ್ತು ಭೋದಕೇತರ ಸಿಬ್ಬಂದಿಯನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರತೀ ನೇಮಕಾತಿಯಲ್ಲಿ ಉನ್ನತ ಶಿಕ್ಷಣ ಸಚಿವರ ಹೆಸರನ್ನು ಬಳಸಿಕೊಂಡು ಹಣ ಸಂಗ್ರಹ ಮಾಡಲಾಗಿದೆ. ಇಲ್ಲಿನ ಅಕ್ರಮ ತನಿಖೆಗೆ ರಚನೆಯಾಗಿದ್ದ ಜಸ್ಟೀಸ್ ಭಕ್ತವತ್ಸಲ ಸಮಿತಿಯ ವರದಿಯನ್ನು ಕಡೆಗಣಿಸಿ, ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಪದೋನ್ನತಿ ಮಾಡಲಾಗಿದೆ. ವಿಶ್ವವಿದ್ಯಾಲಯದ 01-04-2006ರ ನಂತರ ನೇಮಕವಾದ ಸಿಬ್ಬಂದಿಗೆ ಎನ್‌ ಪಿಎಸ್‌ ಪಿಂಚಣಿ ಯೋಜನೆ ಜಾರಿಗೊಳಿಸಲು ಸಂಪನ್ಮೂಲದ ಕೊರತೆಯಿದೆ ಎಂದು ಹೇಳುವ ವಿಶ್ವವಿದ್ಯಾಲಯ ಅಕ್ರಮದ ಮೂಲಕ ಹಲವಾರು ಕೋಟಿ ರೂಪಾಯಿಗಳನ್ನು ಇತರೆ ಕಾಮಗಾರಿಗೆ ನೀಡಿದೆ. ವಿಶ್ವವಿದ್ಯಾಲಯದಲ್ಲಿ ಸಹಕಾರ ಸಂಸ್ಥೆಗಳ ಪರೀಕ್ಷೆಗಳನ್ನು ನಡೆಸಲು ಲಕ್ಷಾಂತರ ರೂಪಾಯಿಗಳನ್ನು ಪಡೆಯಲಾಗಿದ್ದು, ನಿಯಮಗಳಿಗೆ ವಿರುದ್ಧವಾಗಿ ವಿಶ್ವವಿದ್ಯಾಲಯದ ಸಹಸಂಯೋಜಕರ ಹೆಸರಿನಲ್ಲಿ ಖಾತೆ ತೆಗೆದು ಈ ಹಣವನ್ನು ಬಳಸಲಾಗಿದೆ. ಲಕ್ಷಾಂತರ ರೂಪಾಯಿಗಳನ್ನು ನಗದು ರೂಪದಲ್ಲಿ ಈ ಖಾತೆಯಿಂದ ಪಡೆಯುವ ಮೂಲಕ ಹಣ ವರ್ಗಾವಣೆ (ಮನಿಲಾಂಡ್ರಿಂಗ್) ನಡೆಸಲಾಗಿದ್ದು, ತಕ್ಷಣ ತನಿಖೆಯಾಗಬೇಕಾಗಿದೆ. .

21-02-2022ರಲ್ಲಿ ನವದೆಹಲಿಯ ಯುಜಿಸಿ ಸಂಸ್ಥೆಯು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ವಿಶ್ವವಿದ್ಯಾಲಯದ ಕುಲಪತಿಗಳ ಮೇಲೆ ಬಂದಿರುವ ಅಕ್ರಮಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಆದೇ ರೀತಿ ಸಹಕಾರ ಸಂಸ್ಥೆಗಳ ಪರೀಕ್ಷಾ ಅಕ್ರಮಗಳ ಸಂಬಂಧ ತನಿಖೆ ಮಾಡಲು ಸಹಕಾರ ಸಚಿವರ ಸೂಚನೆಯ ಮೇರೆಗೆ ಸಹಕಾರ ಇಲಾಖೆಯು ನಿಭಂದಕರಿಗೆ ಪತ್ರ ಬರೆದಿದೆ. ಇಷ್ಟೆಲ್ಲಾ ಗುರುತರ ಆರೋಪಗಳ ಮಧ್ಯೆ ರಾಜ್ಯಪಾಲರು ಇವರ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಈಗಿನ ಕುಲಪತಿಗಳು ಉನ್ನತ ಶಿಕ್ಷಣ ಸಚಿವರಿಗೆ ಆಪ್ತರಾಗಿದ್ದು, ರಾಜ್ಯದ ವಿಶ್ವವಿದ್ಯಾಲಯಗಳ ಮತ್ತು ಉನ್ನತ ಶಿಕ್ಷಣ ಸಚಿವರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಇದೇ ಸಂಪರ್ಕ ಮತ್ತು ಪ್ರಭಾವವನ್ನು ಬಳಸಿಕೊಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾಗಲು ಪ್ರಯತ್ನಿಸುತ್ತಿದ್ದಾರೆ.

ರಾಜ್ಯಪಾಲರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘನತೆ ಮತ್ತು ಗೌರವವನ್ನು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣವನ್ನು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ, ಈ ವಿಶ್ವವಿದ್ಯಾಲಯದ ಸಿಬ್ಬಂದಿಯ ಹಿತಾಸಕ್ತಿಯನ್ನು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಆರೋಪಿತ ಕುಲಪತಿಗಳ ಮೇಲೆ ನ್ಯಾಯಾಂಗ ತನಿಖೆ ಒಳಪಡಿಸಿ, ವಿಶ್ವವಿದ್ಯಾಲಯ ಮತ್ತು ಇದರ ಹಣವನ್ನು ಸಂರಕ್ಷಿಸಬೇಕು ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ  ರಮೇಶ್ ಬಾಬು ಒತ್ತಾಯಿಸಿದ್ದಾರೆ.

Key words: KSOU-VC- money-congress-leasder-Ramesh babu