KRS ಗೆ ಬಾಗೀನ, ರಾಜವಂಶಸ್ಥರನ್ನೂ ಆಹ್ವಾನಿಸಿ : ಕಾರ್ಪೋರೇಟರ್ ಮನವಿ.

ಮೈಸೂರು,ಜುಲೈ,11,2022(www.justkannada.in):  ನಿರಂತರ ಮಳೆಯಿಂದಾಗಿ ಭರ್ತಿಯಾಗುತ್ತಿರುವ ಕೆ.ಆರ್ ಎಸ್ ಗೆ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನೂ ಆಹ್ವಾನಿಸಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ  ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ವಿ.ಪಿಯಾ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಪಾಲಿಕೆ ಸದಸ್ಯ ಲೋಕೇಶ್ ವಿ.ಪಿಯಾ, ರಾಜ್ಯದಲ್ಲಿ ಕಳೆದ ಕೆಲದಿನಗಳಿಂದ ವರುಣನ ಕೃಪೆಯಿಂದ ನಿರಂತರ ಮಳೆ ಬೀಳುತ್ತಿದೆ. ಪರಿಣಾಮ ಜಿಲ್ಲೆಯ ರೈತರ ಜೀವನಾಡಿಯಾದ ಕೃಷ್ಣರಾಜಸಾಗರ ಜಲಾಶಯ ಭರದಿಂದ ತುಂಬುತ್ತಿದೆ. ಸದ್ಯದಲ್ಲೇ ಭಾಗೀನ ಅರ್ಪಣೆ ಸಮಾರಂಭ ಆಯೋಜಿಸಲು ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದ್ದು, ಈ ಬಾಗೀನ ಅರ್ಪಣೆ ವೇಳೆ ರಾಜ್ಯ ಸರಕಾರದ ಗಣ್ಯರ ಜತೆಗೆ ಮೈಸೂರು ರಾಜವಂಶದವರನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೈಸೂರು ಮಹಾರಾಜರು ಕೆ.ಆರ್.ಎಸ್. ಡ್ಯಾಮ್ ನಿರ್ಮಾಣಕ್ಕೆ ತನು, ಮನ ಹಾಗೂ ಧನವನ್ನು ವ್ಯಯಿಸಿದ್ದು ಎಲ್ಲರಿಗೂ ತಿಳಿದದ್ದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾವೇರಿಗೆ ಭಾಗೀನ ಅರ್ಪಿಸುವ ವೇಳೆ ರಾಜವಂಶದ ಉತ್ತರಾಧಿಕಾರಿ ಯದುವೀರ್ ಅವರನ್ನು ಆಹ್ವಾನಿಸುವಂತೆ ವಿನಂತಿ ಮಾಡುವುದಾಗಿ ತಿಳಿಸಿದ್ದಾರೆ.

Key words: KRS-Bagina- Invite-Yaduveer-mysore- Corporator,