ಕೇಸರಿ ಶಾಲು ವಿವಾದ: ವಿದ್ಯಾರ್ಥಿಗೆ ಚಾಕು ಇರಿತ.

ಕೊಡಗು,ಫೆಬ್ರವರಿ,8,2022(www.justkannada.in): ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಚಾಕು ಇರಿದಿರುವ ಘಟನೆ ಕೊಡಗು ಜಿಲ್ಲೆ  ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರದ ಸುಂದರನಗರ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ. ಇದೇ ಕಾಲೇಜಿನ ಸಂದೀಪ ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ. ಕೇಸರಿ ಶಾಲು ಹಾಕುವ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ವಿದ್ಯಾರ್ಥಿ ಸಂದೀಪ ಎಂಬವರ ಹೆಗಲು ಹಾಗೂ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ. ತಕ್ಷಣ ಸಂದೀಪ್  ಕುಶಾಲನಗರ ಆಸ್ಪತ್ರೆಗೆ ದಾಖಲಾಗಿದ್ದು, ಈ ಗಲಾಟೆ ಸಂಬಂಧ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ವಿಕ್ಕು ಹಾಗೂ ಧನು ಎಂಬವರನ್ನು ಕುಶಾಲನಗರ ಪಟ್ಟಣ ಠಾಣಾ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಸಂದೀಪ ಎಂಬವರು ತನ್ನ ಸ್ನೇಹಿತೆಗೆ ಒತ್ತಾಯ ಪೂರ್ವಕವಾಗಿ ಕೇಸರಿ ಶಾಲು ಹಾಕಲು ಬಂದ ಕಾರಣ ಗಲಾಟೆ ನಡೆಯಿತು ಎಂದು ಆರೋಪಿ ವಿಕ್ಕು ಹೇಳಿಕೆ ನೀಡಿದ್ದಾನೆ. ಅಲ್ಲದೆ  ನನ್ನ ಮೇಲೆ ಸಂದೀಪ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ ಕಾರಣ ಚಾಕು ಹಾಕಿದೆ ಎಂದು ವಿಕ್ಕು ಹೇಳಿಕೆ ನೀಡಿದ್ದಾನೆ.  ಇನ್ನು ವಿಕ್ಕು ತಲೆ ಹಾಗೂ ಕೈ ಭಾಗಕ್ಕೆ ಪೆಟ್ಟಾಗಿದೆ. ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಪೋಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Key words: kodagu- Stab -knife – student.