ಬೆಂಗಳೂರು ಉತ್ತರ ವಿವಿಯಲ್ಲಿ ‘ನಾಲೆಡ್ಜ್‌ ಸಿಟಿ ‘-ಡಿಸಿಎಂ ಡಾ. ಅಶ್ವತ್ಥನಾರಾಯಣ್ ಹೇಳಿಕೆ…

ದೇವನಹಳ್ಳಿ,ಫೆ,5,2020(www.justkananda.in):  ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿಸುವ ನಿಟ್ಟಿನಲ್ಲಿ ಹಲವು ಹೊಸ ಪ್ರಯತ್ನಗಳು ಆಗಲಿದ್ದು, ಕ್ಯಾಂಪಸ್‌ನಲ್ಲಿ “ನಾಲೆಡ್ಜ್‌ ಸಿಟಿ” ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬುಧವಾರ ಹೇಳಿದ್ದಾರೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣಕ್ಕೆ ನಿಗದಿಯಾಗಿರುವ ಸ್ಥಳವನ್ನು ಪರಿಶೀಲಿಸಿದ ನಂತರ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥನಾರಾಯಣ್.  ಈ ಸಂದರ್ಭದಲ್ಲಿ ಶಾಸಕ ವಿ ಮುನಿಯಪ್ಪ,  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆಂಪರಾಜು ಉಪಸ್ಥಿತರಿದ್ದರು.

“ಈ ಭಾಗದ ಜನರ ಬಹುದಿನಗಳ ಅಪೇಕ್ಷೆ ಆದಷ್ಟು ಬೇಗ ಈಡೇರುವುದು.  ವಿಶ್ವವಿದ್ಯಾಲಯಕ್ಕೆ ಸದ್ಯ110 ಎಕರೆ ಜಾಗ ಲಭ್ಯವಾಗಿದ್ದು, 60 ಎಕರೆ ಖರೀದಿಗೆ ಪ್ರಕ್ರಿಯೆಗಳು ನಡೆದಿವೆ.  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಈ ಪ್ರದೇಶದಲ್ಲೇ ‘ನಾಲೆಡ್ಜ್‌ ಸಿಟಿ’ ಸ್ಥಾಪಿಸುವ ಉದ್ದೇಶ ಇದೆ.  ವಿಶ್ವವಿದ್ಯಾಲಯಗಳಲ್ಲಿ ಸದಾ ಹೊಸತನ ಇರಬೇಕು. ಕಾಲ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ತರಬೇಕು. ಈ ನಿಟ್ಟಿನಲ್ಲಿ   ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿಸಲು ಹೊಸ ಪ್ರಯತ್ನಗಳು ಆಗಲಿವೆ,’ಎಂದು ಸಚಿವರು ತಿಳಿಸಿದರು.

ಸೆಲ್ಫಿ ಸಂಭ್ರಮ

ಅಮರಾವತಿ ಗ್ರಾಮಕ್ಕೆ ಭೇಟಿ ನೀಡುವ ಮೊದಲು ದೇವನಹಳ್ಳಿಯ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜತೆ ಡಾ. ಅಶ್ವತ್ಥನಾರಾಯಣ ಸಮಾಲೋಚನೆ ನಡೆಸಿದರು.

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರ ಭೇಟಿಯಿಂದ ಇಡೀ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ ಆಗಿತ್ತು. ತಮ್ಮ ಜತೆ ಸಮಾಲೋಚನೆ ನಡೆಸಿದ ಸಚಿವರ ಜತೆ ವಿದ್ಯಾರ್ಥಿಗಳು ಸೆಲ್ಫಿ ತೆಗಿಸಿಕೊಂಡು ಖುಷಿ ಪಟ್ಟರು.

ಬಸ್‌ ವ್ಯವಸ್ಥೆಗೆ ತುರ್ತು ಆದೇಶ

ದೇವನಹಳ್ಳಿಯಿಂದ ಕಾಲೇಜಿಗೆ ಬಿಎಂಟಿಸಿ ಬಸ್‌ ಸೌಲಭ್ಯ ಇಲ್ಲ ಎಂಬ ವಿದ್ಯಾರ್ಥಿಗಳ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಸಚಿವರು, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.  ಲ್ಯಾಪ್‌ಟಾಪ್ ಹಾಗೂ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದರು.

Key words: ‘Knowledge City’-North- Bangalore-DCM- Dr.Ashwatthanarayan.