ದಿಢೀರ್ ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು….

ಬೆಂಗಳೂರು, ಜುಲೈ 28,2019(www.justkannada.in): ಸ್ಫೀಕರ್ ರಮೇಶ್ ಕುಮಾರ್ ಅವರು ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಮೇಶ್ ಕುಮಾರ್ ಹೇಳಿದ್ದೇನು…?

* ಜುಲೈ 26ರಂದು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿ ಎಲ್ಲಾ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ. ಜುಲೈ 23ರಂದು ಕುಮಾರಸ್ವಾಮಿ ಅವರು ವಿಶ್ವಾಸಮತದಲ್ಲಿ ಸೋಲು ಅನುಭವಿಸಿದ್ದರು.

* ಯಡಿಯೂರಪ್ಪ ಅವರು ನನಗೆ ಸಂಪರ್ಕ ಮಾಡಿ ವಿಶ್ವಾಸಮತಯಾಚನೆ ಮಾಡಲು ಮನವಿ ಮಾಡಿದ್ದಾರೆ. ಧನವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಸದನ ಕರೆಯಬೇಕು ಎಂದು ಹೇಳಿದ್ದಾರೆ.

* ಸಭಾಧ್ಯಕ್ಷನಾಗಿ ನಮ್ಮ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಎಲ್ಲಾ ಸದಸ್ಯರಿಗೆ ಸೋಮವಾರ ಬೆಳಗ್ಗೆ 11ಗಂಟೆಗೆ ಸದನಕ್ಕೆ ಬರಬೇಕು ಎಂದು ಸೂಚನಾ ಪತ್ರವನ್ನು ಕಳಿಸಿದ್ದೇವೆ. ವಿಶ್ವಾಸಮತ, ಧನ ವಿನಿಯೋಗ ವಿಧೇಯಕ ಮಸೂದೆ ಇದೆ ಎಂದು ಕಾರ್ಯ ಸೂಚಿಯನ್ನು ತಿಳಿಸಿದ್ದೇವೆ.

* ಶನಿವಾರ, ಭಾನುವಾರ 2 ದಿನ ಮಾತ್ರ ಇದ್ದ ಕಾರಣ ನಮ್ಮ ಕಚೇರಿ ಎರಡೂ ದಿನವೂ ಕಾರ್ಯ ನಿರ್ವಹಣೆ ಮಾಡುತ್ತಿದೆ. ನನ್ನ ಮುಂದೆ ಇರುವ ರಾಜೀನಾಮೆ, ಅನರ್ಹತೆ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕಾದ ಅನಿವಾರ್ಯತೆ ಬಂದಿದೆ. ಸೋಮವಾರ ಅಧಿವೇಶನ ಇರುವ ಕಾರಣ ಇಂದು ಇತ್ಯರ್ಥ ಮಾಡಬೇಕು.

* ಇಂದು ನನಗೆ ದುಃಖಕರ ದಿನ, ನನ್ನ ಸಾರ್ವಜನಿಕ ಬದುಕಿಗೆ ಪರಿಣಾಮಕಾರಿ ಸಲಹೆ ನೀಡಿ, ಮಾರ್ಗದರ್ಶನ ಕೊಟ್ಟ ಜೈಪಾಲ್ ರೆಡ್ಡಿ ಅವರು ನಿಧನರಾಗಿದ್ದಾರೆ. ವೈಯಕ್ತಿಕವಾಗಿ ಹಿರಿಯಣ್ಣನಂತೆ ನನಗೆ ಆಪ್ತರಾಗಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿ.

* ಜೈಪಾಲ್ ರೆಡ್ಡಿ ಅವರನ್ನು ನೆನಪು ಮಾಡಿಕೊಂಡು ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್. 10/7/2019ರಂದು ಅನರ್ಹತೆಯ ಅರ್ಜಿಯನ್ನು ಅರ್ಜಿದಾರರು ಸಲ್ಲಿಸಿದ್ದಾರೆ. ರಾಜ್ಯದ ರಾಜಕೀಯ ಬದಲಾವಣೆಗಳನ್ನು ಅನುಸರಿಸಿ ಅರ್ಜಿದಾರರು ಮತ್ತೊಂದು ಪತ್ರವನ್ನು ಸಲ್ಲಿಸಿದ್ದಾರೆ. ಆ ಆರ್ಜಯ ಅನ್ವಯ ಮೂರು ದಿನದೊಳಗೆ ಉತ್ತರಿಸುವಂತೆ ಎಲ್ಲರಿಗೂ ನೋಟಿಸ್ ನೀಡಿದೆ. ನಾಲ್ಕು ವಾರದ ಸಮಯವನ್ನು ಪ್ರತಿವಾದಿಗಳು ಕೇಳಿದ್ದರು. ಅದಕ್ಕೆ ಒಪ್ಪಿಗೆ ನೀಡಿಲ್ಲ.

* 12/7/2019ರಂದು ಕುಮಾರಸ್ವಾಮಿ ಅವರು 3 ಶಾಸಕರ ಅನರ್ಹತೆ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅವರಿಗೂ ನೋಟಿಸ್ ನೀಡಲಾಗಿತ್ತು. ಅವರ ವಕೀಲರು ಹಾಜರಾಗಿ 4 ವಾರಗಳ ಕಾಲಾವಕಾಶ ಕೇಳಿದ್ದರು. ಆದರೆ, ಅದಕ್ಕೆ ಒಪ್ಪಿಗೆ ನೀಡಿಲ್ಲ.