ಬಿಟಿಎಸ್ ವಿದ್ವತ್ ಗೋಷ್ಠಿ : ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸುಭದ್ರ- ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್,

kannada t-shirts

 

ಬೆಂಗಳೂರು, ನ.17, 2021 : (www.justkannada.in news ) ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸುಭದ್ರವಾಗಿರುತ್ತದೆ.  ಆಹಾರ ಸುಭದ್ರತೆ, ಸುಸ್ಥಿರ ಇಂಧನ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುವುದು ಅವಶ್ಯಕ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ಆರಂಭವಾದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ನಡೆದ ‘ವಿದ್ವತ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿ ಹೆಚ್ಚಿಸುವ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಬೇಕು ಎಂದರು.

ಗೂಗಲ್, ಮೈಕ್ರೊಸಾಫ್ಟ್ ಅಂತಹ ಖಾಸಗಿ ಸಂಸ್ಥೆಗಳು ಸಹ ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. ಕಡಿಮೆ ದರದಲ್ಲಿ ದೊರಕುವ ಉದ್ಯೋಗಿಗಳಿಂದ ಆರ್ಥಿಕತೆ ಬೆಳೆಯುವುದಿಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸುಭದ್ರವಾಗಿರಲಿದೆ. ಈಗ ಭಾರತದಲ್ಲಿ ಸಂಶೋಧನೆಗಳಿಗಾಗಿ ಜಿ.ಡಿ.ಪಿ.ಯ ಶೇ 0.8ರಷ್ಟು ಹೂಡಿಕೆಯಾಗುತ್ತಿದ್ದು, ಇದು ಕೊರಿಯಾ, ಜಪಾನ್ ಮತ್ತಿತರ ದೇಶಗಳಿಗೆ ಹೋಲಿಸಿದರೆ ಶೇ 25ಕ್ಕಿಂತ ಕಡಿಮೆ ಇದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ಸಮಾಧಾನಕರ ಎಂದರು.

ಸಂಶೋಧನೆ ಮತ್ತು ತಂತ್ರಜ್ಞಾನ ಪರಸ್ಪರ ಪೂರಕ.  ಯಾವುದೇ ದೇಶದ ಬೆಳವಣಿಗೆಯು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗಿಂತ  ಜ್ಞಾನ ಮತ್ತು ಸಂಶೋಧನೆಯ ಮೇಲೆ ಅವಲಂಬಿತವಾಗಿರುತ್ತದೆ. ತಂತ್ರಜ್ಞಾನ ಮತ್ತು ಸಂಶೋಧನೆಗಳಿಗೆ ಹೆಚ್ಚು ತೆರೆದುಕೊಂಡಿಲ್ಲದ ರಾಷ್ಟ್ರಗಳು ಅಭಿವೃದ್ಧಿ ಹೊಂದಿಲ್ಲ ಎಂದು ಪ್ರೊ. ವೆಂಕಿ ರಾಮಕೃಷ್ಣನ್ ಅಭಿಪ್ರಾಯಪಟ್ಟರು.

ಇಂದು ಜಗತ್ತಿನ ಟ್ರಿಲಿಯನ್ ಗಟ್ಟಲೆ ಡಾಲರ್ ವ್ಯವಹಾರ ನಡೆಸುವ ಹಲವು ಕಂಪನಿಗಳು ಹುಟ್ಟಿರುವುದಕ್ಕೆ ಹೊಸ ಸಂಶೋಧನೆಗಳೇ ಕಾರಣ.  ಕ್ವಾಂಟಮ್ ವಿಜ್ಞಾನದ ಅಧ್ಯಯನದ ಫಲವಾಗಿ ಟ್ರಾನ್ಸಿಸ್ಟರ್. ಲೇಸರ್ನಂತಹ ಹೊಸ ಶೋಧನೆಗಳು ಸಾಧ್ಯವಾದವು. ನ್ಯೂಟನ್ ಅವರ ‘ಲಾ ಆಫ್ ಮೋಷನ್’ ಬಳಸಿ ರಾಕೆಟ್, ಉಪಗ್ರಹಗಳ ಉಡಾವಣೆಯಲ್ಲಿ ಬಹಳ ದೊಡ್ಡ ಸಾಧನೆ ಸಾಧ್ಯವಾಯಿತು. ಜಿಪಿಎಸ್ ಅನ್ವೇಷಣೆಯ ಹಿಂದಿನ ತತ್ವವು ಆಲ್ಬರ್ಟ್ ಐನ್ ಸ್ಟೀನ್ ಅವರ ‘ಥಿಯರಿ ಆಫ್ ರಿಲೇಟಿವಿಟಿ’ಯನ್ನು ಆಧರಿಸಿದೆ ಎಂದು ವಿವರಿಸಿದರು.

ಕೋವಿಡ್ ಸಂದರ್ಭದಲ್ಲಿ ನೀಡಲಾದ ಲಸಿಕೆಯ ಶೋಧನೆಯ ಹಿಂದೆ ಸುಮಾರು 1965-2018ರ ನಡುವಿನ ಹಲವು ಶೋಧನೆಗಳು ನೆರವಿಗೆ ಬಂದಿವೆ ಎಂದ ಅವರು, ತಮ್ಮ ಸಂಶೋಧನೆಯ ರೈಬೋಸೋಮ್ಸ್ ಅಧ್ಯಯನವು ಕೋವಿಡ್ ಲಸಿಕೆ ತಯಾರಿಕೆಯಲ್ಲಿ ನೆರವಾದ ಬಗೆ, ಇನ್ನಿತರ ಪೂರಕ ಶೋಧನೆಗಳ ಬಗ್ಗೆ ವಿಷಯಗಳನ್ನು ಹಂಚಿಕೊಂಡರು.

ಬೆಂಗಳೂರು ಜಗತ್ತಿನ ತಂತ್ರಜ್ಞಾನದ ಬೇಡಿಕೆಯನ್ನು ಪೂರೈಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಕೋವಿಡ್ ನಂತರ ಜಗತ್ತಿನ ಡಿಜಿಟಲ್ ಎಕಾನಮಿ ವ್ಯವಸ್ಥೆಯು ಬಹು ದೊಡ್ಡ ಸ್ಥಿತ್ಯಂತರವನ್ನು ಕಂಡಿದ್ದು, ಭಾರತದಲ್ಲೇ  ನೂರು ಕೋಟಿ ವ್ಯವಹಾರ ನಡೆಸುವಂತೆ ಸಾಧ್ಯವಾಗಿದ್ದು ತಂತ್ರಜ್ಞಾನದ ಪ್ರಭಾವದಿಂದ ಎಂದು ಕಿಂಡ್ರೆಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್  ಅಭಿಪ್ರಾಯಪಟ್ಟರು.

ಸಾಮಾಜಿಕ ಜೀವನ, ವೈದ್ಯವೃತ್ತಿ, ಉದ್ಯೋಗಗಳು, ಕೃಷಿ-ಆಹಾರ ಉತ್ಪನ್ನಗಳ ಕ್ಷೇತ್ರಗಳ ಕಾರ್ಯಶೈಲಿಯಲ್ಲಿ ಕೋವಿಡ್ ತರುವಾಯದ ಸಮಗ್ರ ಬದಲಾವಣೆಗೆ ತಂತ್ರಜ್ಞಾನವು ಸಹಾಯಕವಾಗಿ ಒದಗಿಬಂದಿದೆ ಎಂದರು.

2020ರ ವೇಳೆಗೆ ಭಾರತದಲ್ಲಿ 500 ದಶಲಕ್ಷ ಸ್ಮಾರ್ಟ್ ಫೋನ್ ಬಳಕೆದಾರರಿದ್ದರೆ, ಈಗ ಅದು 820 ದಶಲಕ್ಷಕ್ಕೆ ಹೆಚ್ಚಾಗಿದೆ. ಭಾರತ ಸರ್ಕಾರವು ಕೇವಲ 278 ದಿನಗಳಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಾಗಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ಉಜ್ವಲವಾಗಿದ್ದು ದತ್ತಾಂಶಗಳ ಬಳಕೆ ಮತ್ತು ನಿರ್ವಹಣೆ ಮೂಲಕ ಮಹತ್ತನ್ನು ಸಾಧಿಸಬಹುದು ಎಂದು ಹೇಳಿದರು.

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರ ಬದುಕು-ಸಾಧನೆಗಳ ಕಿರುಪರಿಚಯ ಮಾಡಿದರು.

key words : karnataka-bangalore-tech-summit-BTS

website developers in mysore