ಪಕ್ಷಾಂತರ ನಿಷೇಧ ಕಾಯಿದೆ : ಮೇ 28 ರಂದು ಸಂಸದೀಯ ಗಣ್ಯರ ಸಭೆ

 

ಬೆಂಗಳೂರು, ಮೇ 27, 2020: ( www.justkannada.in news )ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಭಾರತ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ಪೀಠಾಸೀನ ಅಧಿಕಾರಿಗಳಿಗೆ ಲಭ್ಯವಿರುವ ಅಧಿಕಾರಗಳು ಹಾಗೂ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಕುರಿತಂತೆ ಅಭಿಪ್ರಾಯ ಪಡೆಯಲು ಮೇ 28 ರಂದು ಗುರುವಾರ ಬೆಳಿಗ್ಗೆ 10-30 ಗಂಟೆಗೆ ವಿಧಾನ ಸೌಧದ ಮೊದಲನೆಯ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಸಂಸದೀಯ ಗಣ್ಯರ ಸಭೆ ನಡೆಯಲಿದೆ.

ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ವಿಧಾನ ಸಭೆಯ ಉಪ ಸಭಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ, ರಾಜ್ಯ ವಿಧಾನ ಸಭೆಯ ಸರ್ಕಾರದ ಮುಖ್ಯ ಸಚೇತಕ ವಿ ಸುನೀಲ್ ಕುಮಾರ್, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗಳ ಹೊತ್ತ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಕೆ ಜಿ ಬೋಪಯ್ಯ, ಉಮೇಶ್ ವಿಶ್ವನಾಥ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಅವರು ಭಾರತೀಯ ಜನತಾ ಪಕ್ಷದ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ.

 karnataka-bangalore-anti-defection.law-meeting

ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಸಕರಾದ ಕೆ ಆರ್ ರಮೇಶ್ ಕುಮಾರ್, ಆರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್, ಕೃಷ್ಣ ಬೈರೇಗೌಡ, ಅಜಯ್ ಧರ್ಮಸಿಂಗ್ ಮತ್ತು ಡಾ ಜಿ ಪರಮೇಶ್ವರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾಗಿ ಹಾಗೂ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ, ಎಂ ಕೆ ಶಿವಲಿಂಗೇಗೌಡ, ವೆಂಕಟರಾವ್ ನಾಡಗೌಡ ಮತ್ತು ಎ. ಟಿ. ರಾಮಸ್ವಾಮಿ ಅವರು ಜಾತ್ಯಾತೀತ ಜನತಾದಳ ಪಕ್ಷದ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ.

ಅಲ್ಲದೆ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ಮತ್ತು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್ ವೈ ವಟವಟಿ ಅವರೂ ಸಭೆಯಲ್ಲಿ ಹಾಜರಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

key words : karnataka-bangalore-anti-defection.law-meeting