ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕಕ್ಕೆ 642.26 ಕೋಟಿ ಮಂಜೂರು.

ಬೆಂಗಳೂರು,ಜನವರಿ,13,2022(www.justkannada.in):  ಸಂಕ್ರಾಂತಿ ಹಬ್ಬಕ್ಕೆ ಕೃಷಿ ಇಲಾಖೆ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ   ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಈ ಯೋಜನೆಯಡಿ ಕೇಂದ್ರದಿಂದ ಶೇ.60 ರಾಜ್ಯದಿಂದ ಶೇ.40 ರ ಅನುಪಾತದಲ್ಲಿ ಯೋಜನೆಯ ವೆಚ್ಚವನ್ನು ಭರಿಸಲಾಗುತ್ತಿದ್ದು, ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್ ಜಲಾನಯನಗಳ ಉಪಚಾರಕ್ಕೆ 22 ಸಾವಿರ ರೂ. ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ 28 ಸಾವಿರ ರೂ.ವರೆಗೆ ಅನುದಾನ  ಲಭ್ಯವಾಗಲಿದೆ .ಈ ಯೋಜನೆಯನ್ನು ರಾಜ್ಯದ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವನ್ನು ಉಪಚರಿಸಲು ಅನುಮೋದನೆ ನೀಡಲಾಗಿದೆ ಎಂದರು.

ಯೋಜನೆಯ ಮುಖ್ಯ ಉದ್ದೇಶಗಳನ್ನು ವಿವರಿಸಿದ ಸಚಿವ ಬಿಸಿ ಪಾಟೀಲ್ ,ಮಳೆ ನೀರು ಕೊಯ್ಲ ಮೂಲಕ ಮಣ್ಣಿನ ತೇವಾಂಶ ಸಂರಕ್ಷಿಸುವುದು.

ಪರ್ಯಾಯ ಬೆಳೆ ವ್ಯವಸ್ಥೆಗಳು,ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು,ಅಂತರ್ಜಲ ಹೆಚ್ಚಿಸಲು ಅನುಕೂಲವಾಗುತ್ತದೆ.  ಆಸ್ತಿರಹಿತರಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿ (SHGs) ಉತ್ತೇಜಿಸುವುದು

ವಿಕಲಚೇತನರು ಮತ್ತು ಮಹಿಳೆಯರಿಗೆ ಅಭಿವೃದ್ಧಿಪಡಿಸಿದ ಭೂಮಿ, ನೀರು ಮತ್ತು ಜೀವರಾಶಿ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಪ್ರವೇಶ ಮತ್ತು ಅವಕಾಶ ಹಾಗೂ ಎಫ್.ಪಿ.ಒ ಬಳಕೆದಾರರ ಗುಂಪುಗಳು ಮುಂತಾದ ವಿವಿಧ ಸಮುದಾಯ ಸಂಸ್ಥೆಗಳಲ್ಲಿ ಈ ವರ್ಗಗಳ ಜನರಿಗೆ ಸದಸ್ಯತ್ವ ನೀಡಲು ಉತ್ತೇಜಿಸುವುದಾಗಿದೆ ಎಂದರು.

ಜಲಾನಯನ ಅಭಿವೃದ್ಧಿ ಇಲಾಖೆಯ ಸಾಧನೆಗಳನ್ನು ಮುಂದುವರೆಸಿ ಮಾತನಾಡಿದ ಬಿ.ಸಿ.ಪಾಟೀಲ್, 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ ಸುಜಲ-iii ಯೋಜನೆ ಮಾದರಿಯಲ್ಲಿ ವಿಶ್ವಬ್ಯಾಂಕ್ ಅನುದಾನದ ನೆರವಿನಲ್ಲಿ ಹೊಸ ರಿವಾರ್ಡ್ ( ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿಯ ಮೂಲಕ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಯೋಜನೆ ಜಾರಿಗೊಳಿಸಿ ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ರೂ.ವೆಚ್ಚದಲ್ಲಿ ವಿಶ್ವಬ್ಯಾಂಕಿನ ಶೇ.70 ರಾಜ್ಯದ ಶೇ.30 ಪಾಲಿನಂತೆ ಯೋಜನೆಯನ್ನು ಮುಂದಿನ 5  ವರ್ಷಗಳ ಕಾಲ ಅನುಷ್ಠಾನಗೊಳಿಸಲಾಗಿದೆ ಎಂದರು.

ಅಲ್ಲದೇ ದೇಶದಲ್ಲಿಯೇ ಕರ್ನಾಟಕ ಕೃಷಿ ಇಲಾಖೆಯ ಜಲಾನಯನ ಇಲಾಖೆಯು ಇತರೆ ರಾಜ್ಯಗಳಿಗೆ ತಾಂತ್ರಿಕ ಸಲಹೆ ನೀಡಲು ಮಾದರಿಯಾಗಿದ್ದು, ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ “ಲೈಟ್ ಹೌಸ್” ಎಂದು ಗುರುತಿಸಿರುವುದು ಕರ್ನಾಟಕದ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ರಿವಾರ್ಡ್ ಯೋಜನೆಯಡಿ ಕೈಗೊಳ್ಳುವ ಪ್ರಮುಖ ಚಟುವಟಿಕೆಗಳು:

ಈಗಾಗಲೇ ರಾಜ್ಯದ 14 ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ೧೧ ಜಿಲ್ಲೆಗಳಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ಗಳನ್ನು ವಿತರಿಸಲಾಗಿದೆ. ಪ್ರಸ್ತುತ ಹೊಸದಾಗಿ 9 ಜಿಲ್ಲೆಗಳು ಸೇರಿದಂತೆ 19.41 ಲಕ್ಷ ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ( Land Resource Inventory-LRI)ಕೈಗೊಳ್ಳಲಾಗುವುದು.

ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ಬಳಸುವುದರಿಂದ ರೈತರಿಗೆ ಹಿಡುವಳಿವಾರು ಮಣ್ಣಿನ ಪೋಷಾಕಾಂಶಗಳ ಅನ್ವಯ ನಿರ್ದಿಷ್ಟ್ಟ ತಾಂತ್ರಿಕತೆಗಳ ಶಿಪಾರಸ್ಸುನ್ನು ಕೊಡಲು ಸಹಕಾರಿಯಾಗುತ್ತದೆ.

1 ಲಕ್ಷ ಹೆ. ಜಲಾನಯನ ಪ್ರದೇಶದಲ್ಲಿ (20 ಉಪಜಲಾನಯನಗಳು) ಭೂ-ಸಂಪನ್ಮೂಲ (LRI) ಮತ್ತು ಜಲವಿಜ್ಞಾನ ಅಧ್ಯಯನದ (Hydrology) ಶಿಫಾರಸ್ಸುಗಳನ್ನು ಆದರಿಸಿ ವೈಜ್ಞಾನಿಕವಾಗಿ ಸಂಪೂರ್ಣ ಜಲಾನಯನದ ಉಪಚಾರ ಕೈಗೊಳ್ಳುವುದು.

ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿ

ರೈತರಿಗೆ ಸುಧಾರಿತ ಕೃಷಿ-ಹವಾಮಾನ ಸಲಹಾ ಸೇವೆ ಒದಗಿಸುವುದು.

ಭಾರತ ದೇಶದಲ್ಲಿಯೇ ಪ್ರಥಮವಾಗಿದೆ ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಸಂಸ್ಥೆಯಲ್ಲಿ ಜಲಾನಯನ ನಿರ್ವಹಣೆ ಕುರಿತು ಅತ್ಯುನ್ನತ ಮಟ್ಟದ ಅಧ್ಯಯನ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

75- ಅಮೃತ ರೈತ/ಮೀನುಗಾರರ/ನೇಕಾರರ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದಂತೆ  ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಸಕ್ತ ಸಾಲಿನಲ್ಲಿ 250 ಅಮೃತ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇಲ್ಲಿಯವರೆಗೆ ವಿವಿಧ ಇಲಾಖೆಗಳ ವತಿಯಿಂದ 178 ಅಮೃತ ಉತ್ಪಾದಕರ ಸಂಸ್ಥೆಗಳನ್ನು ಅಲ್ಪ ಸಮಯದಲ್ಲಿಯೇ ಕ್ರಮವಹಿಸಿ ಪ್ರಗತಿ ಸಾಧಿಸಲಾಗಿದೆ.ಪ್ರತಿ ಅಮೃತ ಉತ್ಪಾದಕರ ಸಂಸ್ಥೆಗೆ 30 ಲಕ್ಷ ರೂ.ನಂತೆ ಒಟ್ಟು 225 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳಲ್ಲಿ ವೆಚ್ಚ ಭರಿಸಲಾಗುವುದು. ಕೇಂದ್ರ ವಲಯದ 10 ಸಾವಿರ ರೈತ ಉತ್ಪಾದಕರ ಸಂಸ್ಥೆಗಳ ರಚನೆ ಯೋಜನೆಯಡಿ ಇಲಾಖೆಗೆ ನಿಗದಿಪಡಿಸಿರುವ 100 ಉತ್ಪಾದಕರ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 130 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿ ಪ್ರಗತಿ ಸಾಧಿಸಲಾಗಿದೆ.

Key words: Karnataka – allotted -Rs 642.26 crore – Prime Minister’s- Agri-Sinchai scheme.