ಬಿಜೆಪಿ ಮತ್ತು ಎಸ್‍ಡಿಪಿಐ ನಡುವಿನ ಒಳ ಒಪ್ಪಂದದ ಕುರಿತು ನ್ಯಾಯಾಂಗ ತನಿಖೆಯಾಗಲಿ- ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಅಕ್ಟೋಬರ್,3,2022(www.justkannada.in): ಬಿಜೆಪಿ ಮತ್ತು ಎಸ್‍ಡಿಪಿಐ (ಪಿಎಫ್‍ಐನ ರಾಜಕೀಯ ಪಕ್ಷ) ನಡುವಿನ ಒಳ ಒಪ್ಪಂದದ ಕುರಿತು  ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪಿಎಫ್ ಐ ಭಾಗ್ಯ ಎಂದು ಲೇವಡಿ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದ್ಧ  ಬಿಜೆಪಿ ತಿರುಗೇಟು ನೀಡಿರುವ ಸಿದ್ಧರಾಮಯ್ಯ ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಿಷ್ಟು…

ಭಾರತ್ ಜೋಡೋ ಯಾತ್ರೆಯ ಯಶಸ್ಸು ಮತ್ತು ಇದಕ್ಕೆ ಸಿಗುತ್ತಿರುವ ಜನ ಮನ್ನಣೆಯ ಗಮನವನ್ನು ಮತ್ತೆ ಬೇರೆಡೆಗೆ ಸೆಳೆಯಲು ಬಿಜೆಪಿ ತನ್ನ ಸಾಂಪ್ರದಾಯಿಕವಾದ ಸನಾತನ ಸುಳ್ಳು ಪಾಂಡಿತ್ಯಕ್ಕೆ ಮೊರೆ ಹೋಗಿದೆ.‌ ತಮಗೆ ವಹಿಸಿದ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲಾಗದೆ ನಾಡಿನ ಜನರನ್ನು ಮಳೆ-ಪ್ರವಾಹದ ಪ್ರಪಾತದಲ್ಲಿ ಮುಳುಗಿಸಿದ ಸಚಿವ ಆರ್.ಅಶೋಕ್ ಅವರ ಬಾಯಲ್ಲಿ ಹಳೆ ಸುಳ್ಳನ್ನು ಹೊಸದಾಗಿ ಹೇಳಿಸಿದೆ ಎಂದು ಆರೋಪಿಸಿದ್ದಾರೆ.

ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‍ಐ  ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಆರೋಪದ ಬಗ್ಗೆ ನಾನೇ ನಾಲ್ಕು ಬಾರಿ ಸರ್ಕಾರಕ್ಕೆ ಪತ್ರ ಬರೆದು, ನಮ್ಮ ಸರ್ಕಾರದ ಅವಧಿಯಲ್ಲಿ ಯಾವ ಪಿಎಫ್‍ಐ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಉತ್ತರ ಕೇಳಿದ್ದೆ.  ಆದರೆ ನನಗೆ ಬಿಜೆಪಿ ಸರ್ಕಾರವೇ ಕೊಟ್ಟಿರುವ ಉತ್ತರದಲ್ಲಿ ಎಲ್ಲೂ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಉಲ್ಲೇಖಗಳೇ ಇಲ್ಲ. ಇದನ್ನೇ ನಾನು ನಾಲ್ಕು ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲೂ ತಿಳಿಸಿದ್ದೆ. ಆ ಹೇಳಿಕೆಯಲ್ಲೇ ನಾನು ಶಿವಮೊಗ್ಗ, ಹಾಸನದಲ್ಲಿ “ಫರ್ದಾ ಏ ಫರ್ದಾ” ಲೇಖನ ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳನ್ನೂ ಉಲ್ಲೇಖಿಸಿ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದ್ದನ್ನು ಹೇಳಿದ್ದೆ. ಈ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರು ಇದ್ದರು ಎನ್ನುವ ಬಗ್ಗೆ ಬಿಜೆಪಿ ಸರ್ಕಾರವೇ ನನಗೆ ಕೊಟ್ಟ ಉತ್ತರದಲ್ಲಿ ಉಲ್ಲೇಖಗಳಿಲ್ಲ ಎಂದು ಬಿಜೆಪಿಗೆ ಕುಟುಕಿದರು.

ಹಾಗೆಯೇ ಬಿಜೆಪಿ ಸರ್ಕಾರ ನನಗೆ ನೀಡಿರುವ ಉತ್ತರದಲ್ಲಿ ನಮ್ಮ ಸರ್ಕಾರ ರೈತರು, ಕಾರ್ಮಿಕರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರು, ಕಮ್ಮುನಿಸ್ಟ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಗಳಿವೆ. ಆರ್.ಅಶೋಕ್ ಅವರು ಇವುಗಳ ಬಗ್ಗೆ ಏನನ್ನೂ ಪ್ರಸ್ತಾಪ ಮಾಡಿಲ್ಲ.

ಯಾವುದೇ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಒಂದೇ ಸಮುದಾಯಕ್ಕೆ, ಒಂದೇ ಕೋಮಿಗೆ ಸೇರಿದವರು ಎನ್ನುವ ಒಂದೇ ಕಾರಣದಿಂದ ಎಲ್ಲರನ್ನೂ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಎಂದು ಬಿಂಬಿಸುವುದು, ಪಿಎಫ್‍ಐಗೂ ತಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಆರೋಪಿಗಳನ್ನೂ ಪಿಎಫ್‍ಐ ಸಂಘಟನೆಗೆ ಜಮೆ ಮಾಡುವ ಷಡ್ಯಂತ್ರಕ್ಕೆ ಸಚಿವ ಆರ್.ಅಶೋಕ್ ಅವರನ್ನು ಬಿಜೆಪಿ ಮುಂದೆ ಬಿಟ್ಟಿದೆ.

ಸಚಿವ ಆರ್.ಅಶೋಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಆರೋಪಿಗಳು ಪಿಎಫ್‍ಐ ಕಾರ್ಯಕರ್ತರಾಗಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಪಿಎಫ್‍ಐ ಸದಸ್ಯತ್ವದ ದಾಖಲೆಗಳನ್ನೂ ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ನನಗೆ ಕೊಟ್ಟಿರುವ ಉತ್ತರದಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ.

ತನ್ನ ತಟ್ಟೆಯಲ್ಲಿರುವ ಸತ್ತ ಹೆಗ್ಗೆಣವನ್ನು ಪಕ್ಕದವರ ತಟ್ಟೆಗೆ ಬಿಸಾಡುವ ಪಾಂಡಿತ್ಯವನ್ನು ಬಿಜೆಪಿ ಪ್ರದರ್ಶಿಸಿದೆ. ಇದಕ್ಕೆ ಬಿಜೆಪಿ ಶಾಸಕ ಬಸವಗೌಡ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ. “ಪಿಎಫ್‍ಐ ಕಾಂಗ್ರೆಸ್ ನ ಓಟಿನ ಬ್ಯಾಂಕನ್ನು ಛಿದ್ರ ಮಾಡುತ್ತಿತ್ತು” ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸತ್ಯ ತಾನೇ? ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಓಟಿನ ಬ್ಯಾಂಕನ್ನು ಛಿದ್ರ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತಿರಲಿಲ್ಲವೇ?  ರಾಜ್ಯದಲ್ಲಿ ಸಂಭವಿಸುತ್ತಲೇ ಇರುವ ಮಳೆ ಅನಾಹುತದಲ್ಲಿ ನೊಂದು ಬೆಂದವರ, ಪ್ರವಾಹದಲ್ಲಿ ಕೊಚ್ಚಿ ಹೋದವರ ಕುಟುಂಬಗಳ ಕಣ್ಣೀರು ಒರೆಸುವ ಯೋಗ್ಯತೆ ಇಲ್ಲದ ಸಚಿವ ಆರ್.ಅಶೋಕ್ ತಮಗೆ ಗೊತ್ತಿಲ್ಲದ, ಅರ್ಥವೂ ಆಗದ ಸಂಗತಿಗೆ ಮೂಗು ತೂರಿಸಿ ಬೈಠಕ್‍ ನಲ್ಲಿ ಕಲಿತ ಸುಳ್ಳು ಮತ್ತು ಷಡ್ಯಂತ್ರದ ಮಾತುಗಳನ್ನೇ ಮಾಧ್ಯಮಗಳ ಎದುರು ಆಡಿದ್ದಾರೆ.

ಸಂಘ ಪರಿವಾರದ ಅಂಗಳದಲ್ಲೇ ಇರುವ ಪ್ರಮೋದ್ ಮುತಾಲಿಕ್ ಅವರೇ ಕೆಲವು ದಿನಗಳ ಹಿಂದಷ್ಟೇ, “ಪಿಎಫ್‍ಐ ಮತ್ತು ಎಸ್‍ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಇದುವರೆಗೂ ಬಿಜೆಪಿಯವರಾಗಲೀ, ಸಂಘ ಪರಿವಾರವಾಗಲೀ ಅಲ್ಲಗಳೆದಿಲ್ಲ.

ಹಾಗಾದರೆ ಪ್ರಮೋದ್ ಮುತಾಲಿಕ್ ಅವರ ಮಾತು ನಿಜ ತಾನೆ ಎಂದು ನಾನು ಪ್ರಶ್ನಿಸಿದ್ದೆ. ಈ ಪ್ರಶ್ನೆಗೂ ಅಶೋಕ್ ಉತ್ತರಿಸದೆ ಎಸ್ಕೇಪ್ ಆಗಿದ್ದಾರೆ.

ನಮ್ಮ ಸರ್ಕಾರ ರೈತರ, ಕಬ್ಬು ಬೆಳೆಗಾರರ, ಪೌರ ಕಾರ್ಮಿಕರ, ಕಾರ್ಮಿಕ ಸಂಘಟನೆಗಳ, ದಲಿತ ಸಂಘಟನೆಗಳ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಾಗಲೂ, ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಅಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಅಂದ ಮಾತ್ರಕ್ಕೆ ನಾವು ರೈತರ ಕಾರ್ಮಿಕರ ಮೇಲಿನ ಪ್ರಕರಣಗಳನ್ನು ಮುಂದುವರೆಸಬೇಕಿತ್ತೇ? ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲೀಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್‍ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ ಎನ್ನುವ ಮಾತನ್ನು ಮತ್ತೆ ಹೇಳುತ್ತೇನೆ.

ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿರುವ ನೂರಾರು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳ ವಾಹನಕ್ಕೆ ಬೆಂಕಿ ಹಚ್ಚಿದ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ, ಸಮಾಜದ ಶಾಂತಿ ಹದಗೆಡಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ, ದ್ವೇಷ ಭಾಷಣಕೋರರ ಮೇಲಿನ ಪ್ರಕರಣಗಳೂ ಸೇರಿವೆ.  ಇವುಗಳನ್ನು ವಾಪಾಸ್ ಪಡೆಯಲು ಡಿಜಿ-ಐಜಿಪಿ ಮತ್ತು ಕಾನೂನು ಇಲಾಖೆ ಒಪ್ಪಿಗೆ ನೀಡಿತ್ತೇ ಆರ್.ಅಶೋಕ್ ಅವರೇ?

ಹಾಗೆಯೇ ಸಂಘ ಪರಿವಾರದ ಅಂಗಳದಲ್ಲೇ ಇದ್ದು ಹೊರಗೆ ಬಂದಿರುವ ಸತ್ಯಜಿತ್ ಸುರತ್ಕಲ್ ಅವರು, ಪಿಎಫ್‍ಐ ಮತ್ತು ಎಸ್‍ಡಿಪಿಐ ಎರಡೂ ಬಿಜೆಪಿಯ ಬಿ ಟೀಮ್ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಬಿಜೆಪಿ ಮತ್ತು ಸಂಘ ಪರಿವಾರ ಅಲ್ಲಗಳೆದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಚಟುವಟಿಕೆಗಳಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ಇಡಿ ರಾಜ್ಯದ ಜನತೆಗೆ ಗೊತ್ತಿದೆ.

ಹೀಗಾಗಿ, ಬಿಜೆಪಿ ಮತ್ತು ಎಸ್‍ಡಿಪಿಐ (ಪಿಎಫ್‍ಐನ ರಾಜಕೀಯ ಪಕ್ಷ) ನಡುವಿನ ಒಳ ಒಪ್ಪಂದದ ಕುರಿತು  ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯಾಗಲಿ. ಶಾಸಕ ಬಸವನಗೌಡ ಯತ್ನಾಳ್, ಸತ್ಯಜಿತ್ ಸುರತ್ಕಲ್ ಮತ್ತು ಪ್ರಮೋದ್ ಮುತಾಲಿಕ್ ಅವರ ಹೇಳಿಕೆಗಳ ಕುರಿತಾಗಿಯೂ ತನಿಖೆ ನಡೆಯಲಿ. ತನಿಖೆಯಲ್ಲಿ ಹೊರಗೆ ಬರುವ ಸಂಗತಿಗಳನ್ನು ನಾಡಿನ ಜನರ ಮುಂದಿಡಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Key words: judicial inquiry –collusion- between -BJP –SDPI-Former CM -Siddaramaiah