ಹೂಡಿಕೆ ಸಂಬಂಧ ಅಮೆರಿಕದ ವರ್ಜೀನಿಯಾ, ಇಂಡಿಯಾನ ಜತೆ ಚರ್ಚೆ: ಶೀಘ್ರದಲ್ಲೇ ವರ್ಕಿಂಗ್‌ ಗ್ರೂಪ್…

ಬೆಂಗಳೂರು,ಆ,21,2020(www.justkannada.in):  ಕರ್ನಾಟಕ ಮತ್ತು ಅಮೆರಿಕದ ವರ್ಜೀನಿಯಾ, ಇಂಡಿಯಾನ ರಾಜ್ಯಗಳಿಗೆ ಕೈಗಾರಿಕೆ, ವಾಣಿಜ್ಯ, ಬಾಹ್ಯಾಕಾಶ, ರಕ್ಷಣೆ, ಆರೋಗ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ವಿಪುಲವಾದ ಅವಕಾಶಗಳಿದ್ದು, ಇದಕ್ಕಾಗಿ ಕೂಡಲೇ ಕಾರ್ಯನಿರ್ವಹಣಾ ಗುಂಪು (ವರ್ಕಿಂಗ್‌ ಗ್ರೂಪ್) ರಚನೆ ಮಾಡಲಾಗುವುದು  ಎಂದು ಐಟಿಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.Investment -Discussion – Virginia-Indiana- USA-working group.

ಬೆಂಗಳೂರಿನಲ್ಲಿ ಬುಧವಾರ ‌ವರ್ಜೀನಿಯಾ, ಇಂಡಿಯಾನ ರಾಜ್ಯಗಳ ಉನ್ನತ ಪ್ರತಿನಿಧಿಗಳ ಜತೆ ಬಂಡವಾಳ ಹೂಡಿಕೆ ಹಾಗೂ ವಾಣಿಜ್ಯ ಅವಕಾಶಗಳ ಬಗ್ಗೆ ವರ್ಚುವಲ್‌ ಸಂವಾದ ನಡೆಸಿದ ಡಿಸಿಎಂ ಅಶ್ವಥ್ ನಾರಾಯಣ್, ಹೂಡಿಕೆಗೆ ಹಾಗೂ ಹೊಸ ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಕರ್ನಾಟಕ ಅತ್ಯಂತ ಪ್ರಶಸ್ತ್ಯವಾದ ಜಾಗ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರು.

ಮೂರೂ ರಾಜ್ಯಗಳು ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿವೆ. ಅತ್ಯಂತ ಉತ್ಕೃಷ್ಟ ಮಾನವ ಸಂಪನ್ಮೂಲವನ್ನೂ ಹೊಂದಿವೆ. ಹೀಗಾಗಿ ಮಾತುಕತೆ ಹಂತ ಮುಗಿದ ಕೂಡಲೇ ವರ್ಕಿಂಗ್‌ ಗ್ರೂಪ್‌ ಮಾಡಿಕೊಂಡು ಅನುಷ್ಟಾನ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಇದಕ್ಕೆ ಕರ್ನಾಟಕ ಸಿದ್ಧವಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕವು ಇಡೀ ಭಾರತದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಹೆಸರಾಗಿದೆ. ಈಗಾಗಲೇ ಅಮೆರಿಕದ ಅನೇಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿದ್ದು, ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕೆಂಪುಹಾಸಿನ ಸ್ವಾಗತ:

ಸಹಜವಾಗಿಯೇ ಅತ್ಯುತ್ತಮ ಬಾಂಧವ್ಯ ಹೊಂದಿರುವ ಅಮೆರಿಕ- ಭಾರತದಂತೆ ಕರ್ನಾಟಕ ಹಾಗೂ ವರ್ಜೀನಿಯಾ, ಇಂಡಿಯಾನ ರಾಜ್ಯಗಳು ಜೊತೆಯಾಗಿ ಕೆಲಸ ಮಾಡಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಸ್ಪಷ್ಟ ದಿಕ್ಕಿನಲ್ಲಿ ಸಾಗಲು ನಮ್ಮ ರಾಜ್ಯ ತಯಾರಿದೆ. ಎರಡೂ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಹೂಡಿಕೆದಾರರಿಗೆ ಕೆಂಪುಹಾಸಿನ ಸ್ವಾಗತವಿದೆ ಎಂದು ಡಿಸಿಎಂ ಹೇಳಿದಾಗ ಎರಡೂ ರಾಜ್ಯಗಳ ಪ್ರತಿನಿಧಿಗಳು ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ, ಕಾನೂನು ವ್ಯವಸ್ಥೆ, ಮಾನವ ಹಕ್ಕುಗಳ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯಲ್ಲೂ ಭಾರತ ಮತ್ತು ಅಮೆರಿಕ ಹತ್ತಿರವಾಗಿವೆ. ಅದೇ ರೀತಿ ವಾಣಿಜ್ಯ ವಲಯದಲ್ಲೂ ಜತೆಯಾಗಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕವೂ ಅಮೆರಿಕದ ಹೂಡಿಕೆದಾರರಿಗೆ ಫೇವರೀಟ್‌ ತಾಣವಾಗಿದೆ ಎಂದ ಉಪ ಮುಖ್ಯಮಂತ್ರಿಗಳು, 2009ರಲ್ಲಿ ಭಾರತ- ಅಮೆರಿಕ ನಡುವೆ 149 ಶತಕೋಟಿ ಡಾಲರಿಗೂ ಹೆಚ್ಚು ವಹಿವಾಟು ನಡೆದಿತ್ತು. ಇದರ ಪ್ರಮಾಣ ಮತ್ತಷ್ಟು ಹೆಚ್ಚಬೇಕಿದೆ. ಪರಸ್ಪರ ನಮ್ಮ ನಡುವಿನ ಶಕ್ತಿ-ಸಾಮರ್ಥ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೆಜ್ಜೆ ಇಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ತುಂಬಾ ಉತ್ಸುಕತೆಯಿಂದ ಇದೆ ಎಂದು ಹೇಳಿದರು.

ನಮ್ಮ ರಾಜ್ಯವೂ ಪ್ರಸಕ್ತ 220 ಶತಕೋಟಿ ಡಾಲರ್‌ ಜಿಡಿಪಿಯನ್ನು ಹೊಂದಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ಅದನ್ನು 400 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ. 1 ಟ್ರಿಲಿಯನ್‌ ಡಾಲರ್‌ ಜಿಡಿಪಿ ಸಾಧಿಸುವುದು ರಾಜ್ಯದ ಹೆಗ್ಗುರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರಲ್ಲದೆ, ನಮ್ಮ ನೆಲದ ಕಾನೂನುಗಳ ಅರಿವಿದ್ದು ಕೇವಲ ಒಂದು ಅರ್ಜಿಯನ್ನು ಸಲ್ಲಿಸಿ ಯಾವುದೇ ಕೈಗಾರಿಕೆಯನ್ನು ತೆರೆಯಬಹುದು. ಬಳಿಕ ಸಿಂಗಲ್‌ ವಿಂಡೋ ಸಿಸ್ಟಮ್‌ನಲ್ಲಿ ಅಗತ್ಯ ಅನುಮತಿಗಳನ್ನು ಪಡೆಯಬಹುದು. ಕೈಗಾರಿಕೆಗಳಿಗೆ ಎಲ್ಲ ರೀತಿಯ ರಿಯಾಯಿತಿ, ಬೆಂಬಲ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದು ತಿಳಿಸಿದರು.

ಸುಧಾರಣೆಗಳ ಪರ್ವ:

ಕೈಗಾರಿಕಾಭಿವೃದ್ಧಿಯಲ್ಲಿ ಸ್ಪಷ್ಟ ದಿಕ್ಸೂಚಿಯೊಂದಿಗೆ ಸಾಗುತ್ತಿರುವ ರಾಜ್ಯದ ಪ್ರಗತಿಗೆ ಮತ್ತಷ್ಟು ವೇಗ ನೀಡುವ ಸಲುವಾಗಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಇದರಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ಕಾರ್ಮಿಕ ಕಾಯ್ದೆಗಳ ಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸೇರಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಹೆಚ್ಚು ಅನುಕೂಲ ಮತ್ತು ಕೈಗಾರಿಕೆ ಸ್ಥಾಪನೆ ಮಾಡುವುದು ಸುಲಭ ಎಂದು ಡಿಸಿಎಂ ಹೇಳಿದರು.

ಕೋವಿಡ್‌ ಕಾರಣಕ್ಕೆ ಉಂಟಾದ ಎಲ್ಲ ಸವಾಲುಗಳನ್ನು ನಮ್ಮ ರಾಜ್ಯವೂ ಸಮರ್ಥವಾಗಿ ಎದುರಿಸಿದೆ ಮಾತ್ರವಲ್ಲದೆ, ಆ ಬಿಕ್ಕಟ್ಟನ್ನೇ ಮೆಟ್ಟಿ ಹೊಸ ಹೊಸ ಅವಕಾಶಗಳತ್ತ ತೆರೆದುಕೊಂಡಿದೆ. ಅನೇಕ ಸುಧಾರಣೆಗಳೊಂದಿಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಇದೇ ವೇಗದಲ್ಲಿ ಹೂಡಿಕೆಯ ಆಕರ್ಷಣೆಗಾಗಿ ವರ್ಚುವಲ್‌ ಟೆಕ್‌ ಸಮಿಟ್‌ ಹಮ್ಮಿಕೊಳ್ಳಲಾಗುತ್ತಿದ್ದು, ತಮ್ಮೆರಡು ರಾಜ್ಯಗಳು ಮುಕ್ತವಾಗಿ ಭಾಗಿಯಾಗಲು ನಮ್ಮ ಸ್ವಾಗತವಿದೆ ಎಂದು ಅವರು ನುಡಿದರು.Investment -Discussion – Virginia-Indiana- USA-working group.

ಭಾರತೀಯ ಕೈಗಾರಿಕಾ ಒಕ್ಕೂಟದ (ಫಿಕ್ಕಿ) ಸಹ ಅಧ್ಯಕ್ಷ ಸುಧಾಕರ್‌ ಘಾಂಡೆ, ಮೇರಿಲ್ಯಾಂಡ್‌ನ ಸಾರಿಗೆ ಇಲಾಖೆಯ ಮಾಜಿ ಉಪ ಕಾರ್ಯದರ್ಶಿ ಡಾ. ರಾಜನ್‌ ನಟರಾಜನ್‌, ಇಂಡಿಯಾನ ರಾಜ್ಯದ ವಾಣಿಜ್ಯ ಕಾರ್ಯದರ್ಶಿ ಜಿಮ್‌ ಶೆಲ್ಲಿಂಗರ್‌ ಮುಂತಾದವರು ಆನ್‌ʼಲೈನ್‌ ಸಂವಾದದಲ್ಲಿ ಭಾಗಿಯಾಗಿದ್ದರು. ಹಾಗೆಯೇ ಐಟಿಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ವಿ.ವಿ.ರಮಣರೆಡ್ಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಐಟಿ‌ ನಿರ್ದೇಶಕಿ ಮೀನಾ ನಾಗರಾಜ್‌ ಮುಂತಾದವರು ಉಪಸ್ಥಿತರಿದ್ದರು.

Key words: Investment -Discussion – Virginia-Indiana- USA-working group.