ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹಾನೀಯರಿಗೆ ಅಪಮಾನ: ಜೂನ್ 9 ರಂದು ಪ್ರತಿಭಟನೆಗೆ ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು,ಜೂನ್,7,2022(www.justkannada.in):  ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರಂತ ಮಹಾನೀಯರಿಗೆ ಅಪಮಾನ ಮಾಡಲಾಗಿದ್ದು ಇದನ್ನ ಖಂಡಿಸಿ ಜೂನ್ 9 ರಂದು ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ಪಠ್ಯಪುಸ್ತಕ ಪರಿಷ್ಕರಣೆನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಸ್ವಾಮೀಜಿಗಳು, ಹಿರಿಯರು, ಸಾಹಿತಿಗಳು ಕೂಡ ಧ್ವನಿ ಎತ್ತಿದ್ದಾರೆ. ಅವರೆಲ್ಲರ ಧ್ವನಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತೆ. ಪಠ್ಯದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದರು.

ಯಾರ್ಯಾರು ಪಠ್ಯ ಪುಸ್ತಕದ ವಿರುದ್ದ ದನಿ ಎತ್ತಿದ್ದಾರೆ ಅವರಿಗೆ ಬೆಂಬಲ ನೀಡೋದು ನಮ್ಮ ಕರ್ತವ್ಯ. ಜೂನ್ 9 ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬೆಳಿಗ್ಗೆ 10ಕ್ಕೆ ಪ್ರತಿಭಟನೆ ಮಾಡ್ತೇವೆ. ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಮಹನೀಯರಿಗೆ ಅವಮಾನ ಹಿನ್ನೆಲೆ ರಾಜ್ಯ ಸರ್ಕಾರದ ನಡೆ ಖಂಡಿಸಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತೆ. ಪ್ರತಿಭಟನೆಯಲ್ಲಿ ಪಕ್ಷದ ಸಂಸದರು, ಶಾಸಕರು, ಎಂಎಲ್ ​ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Key words: Insult – textbook- revision-congress-protest-DK Shivakumar