ಈದ್ಗಾ ಮೈದಾನ ವಿವಾದ ಹಿನ್ನೆಲೆ: ಚಾಮರಾಜಪೇಟೆ ಬಂದ್: ಅಂಗಡಿ ಮುಂಗಟ್ಟುಗಳು ಕ್ಲೋಸ್.

ಬೆಂಗಳೂರು,ಜುಲೈ,12,2022(www.justkannada.in): ಈದ್ಗಾ ಮೈದಾನ ವಿವಾದ ಹಿನ್ನೆಲೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದೆ.

ಇಂದು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಬಂದ್ ಕರೆ ನೀಡಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿವೆ.ಈದ್ಗಾ ಮೈದಾನ ವಿವಾದ ಸಂಬಂಧ ಮುಸ್ಲಿಮರು ಇದು ಈದ್ಗಾ ಮೈದಾನವೆಂದರೆ, ಹಿಂದೂಗಳು ಅದು ಆಟದ ಮೈದಾನ ಎಂದು ಹೇಳುತ್ತಿದ್ದಾರೆ.

ಚಾಮರಾಜಪೇಟೆ ಬಂದ್​ಗೆ ಕರೆ ಕೊಟ್ಟ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗಷ್ಟೇ ಜನರು ಹೊರಬರುತ್ತಿದ್ದಾರೆ. ಅಲ್ಲದೆ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ರಸ್ತೆಗಿಳಿದಿವೆ. ಈ ಹಿಂದೆ ಮುಸ್ಲಿಂ ವ್ಯಾಪಾರಿಗಳು ಹೇಳಿದಂತೆ ಬಂದ್​ ಗೆ ಬೆಂಬಲವನ್ನು ಸೂಚಿಸಿಲ್ಲ, ಮುಸ್ಲಿಂ ಅಂಗಡಿಗಳು ತೆರೆದಿವೆ. ಮೈದಾನ ಉಳಿಸಿ ಸಾರ್ವಜನಿಕರು ಮೈದಾನದ ಸುತ್ತ ರ್ಯಾಲಿ ನಡೆಸುತ್ತಿದ್ದಾರೆ.

ಬಂದ್ ವೇಳೆ ಆನಂದಪುರ ಏರಿಯಾದಲ್ಲಿ ಗಲಾಟೆ ನಡೆದಿದೆ. ಮುಸ್ಲಿಂ ಅಂಗಡಿಗಳನ್ನ ಮುಚ್ಚುವಂತೆ ಒಕ್ಕೂಟದ ಮಂದಿ ಒತ್ತಾಯಿಸಿದ್ದು ಈ ವೇಳೆ ಮಾತಿನ ಚಕಮಕಿ ನಡೆದಿದೆ.  ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಬೇಡಿ ಎಂದು ಪೊಲೀಸರು ಸೂಚನೆ ನೀಡಿದ್ದು, ಬಳಿಕ ಅಂಗಡಿಗಳನ್ನ ಕ್ಲೋಸ್ ಮಾಡಲಾಗಿದೆ.

ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆಯಲ್ಲಿ ಶಾಂತಿಯುತ ಬಂದ್​​ ನಡೆಯುತ್ತಿದ್ದು,  ಮೈದಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ಈ ನಡುವೆ  ಹೋಟೆಲ್​​ ಗಳು ಸಂಪೂರ್ಣವಾಗಿ ಮುಚ್ಚಲಾಗಿದೆ.

Key words: Idga Maidana- Controversy-Chamarajpet- Bandh