ಮೈಸೂರು ವಿವಿ ‘ಚಿನ್ನ’ದ ವಿದ್ಯಾರ್ಥಿ ಈಗ ಅದೇ ವಿಶ್ವವಿದ್ಯಾಲಯದ ಕುಲಸಚಿವೆ !

ಮೈಸೂರು, ನವೆಂಬರ್ 21, 2022 (www.justkannada.in): ಮೈಸೂರು ‌ವಿಶ್ವವಿದ್ಯಾಲಯದ ‘ಚಿನ್ನ’ದ ವಿದ್ಯಾರ್ಥಿ ಈಗ ಅದೇ ವಿವಿ ಕುಲಸಚಿವೆಯಾಗಿದ್ದಾರೆ!

ಹೌದು. 1998ರಲ್ಲಿ ಬಿ.ಎ ಪದವಿ, 1990ರಲ್ಲಿ ಬಿಎಡ್, 2001ರಲ್ಲಿ ಸ್ನಾತಕೋತ್ತರ ಪದವಿಯ ಮೈಸೂರು ವಿವಿ ವಿದ್ಯಾರ್ಥಿಯಾಗಿ ನಾನಾ ವಿಭಾಗಗಳಲ್ಲಿ ಚಿನ್ನದ ಪದಕ ಹಾಗೂ ನಗದು ಬಹುಮಾನಕ್ಕೆ ಭಾಜನರಾಗಿದ್ದ ಕೆಎಎಎಸ್ ಅಧಿಕಾರಿ ವಿ.ಆರ್.ಶೈಲಜಾ ಅವರು ಈಗ ತಾವು ಓದಿದ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ನೇಮಕವಾಗಿದ್ದಾರೆ.

ಪದವಿ ವ್ಯಾಸಂಗದ ವೇಳೆ 9 ಚಿನ್ನದ ಪದಕ ಹಾಗೂ 7 ನಗದು ಪುರಸ್ಕಾರಕ್ಕೆ ಶೈಲಜಾ ಭಾಜನರಾಗಿದ್ದರು.
ಬಿ.ಎಡ್.ನಲ್ಲಿ ವಿವಿಗೆ ಪ್ರಥಮ Rank ಪಡೆದಿದ್ದರು.
ಸ್ನಾತಕೋತ್ತರ ಪದವಿಯಲ್ಲೂ ಪ್ರಥಮ Rank ಪಡೆದಿದ್ದ ಶೈಲಜಾ ಅವರು 3 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದರು.

2006ರಲ್ಲಿ‌ ಪ್ರೊಬೇಷನರಿ ಕೆಎಎಸ್ ಅಧಿಕಾರಿಯಾಗಿ ವೃತ್ತಿ‌ ಆರಂಭಿಸಿದ ಶೈಲಜಾ ಅವರು ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿಯೂ‌ ಕೆಲಸ ಮಾಡಿದ್ದಾರೆ. ರಾಮನಗರದಲ್ಲಿ ಡಿಯುಡಿಸಿ ವಿಭಾಗದ ಯೋಜನಾ ನಿರ್ದೇಶಕಿಯಾಗಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಂಡವಪುರ ಉಪವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಮಂಡ್ಯ ಜಿಲ್ಲೆಯ ಎಡಿಸಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಶತಮಾನ ಪೂರೈಸಿರುವ ತಾವು ಓದಿದ ವಿವಿಯಲಿ ಕುಲಸಚಿವೆಯಾಗಿ ನೇಮಕವಾಗಿದ್ದಾರೆ.