‘ಒಳ ಒಪ್ಪಂದ’ ಎಂಬ ಆರೋಪ ಮಾಡಿದ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು.

ಹುಬ್ಬಳ್ಳಿ,ಅಕ್ಟೋಬರ್,23,2021(www.justkannada.in):  ಉಪಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯರಿಗೆ ಅದನ್ನು ಬಿಟ್ಟು ಬೇರೆ ಏನು ಹೇಳಲು ಸಾಧ್ಯ. ನಮಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ. ಬಿಜೆಪಿ ಮೇಲೆ‌ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಯಾಕೆ ಸರ್ಕಾರ  ಮಾಡುತ್ತಿದ್ದೆ. ಬಿಜೆಪಿ ಜೊತೆಯೇ 5 ವರ್ಷ ಕಾಲ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ. ಅವರ ನಡವಳಿಕೆಯಿಂದ ನಾವು ಸರ್ಕಾರ ಮಾಡಿದ್ದೆವು ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯಗೆ ಕುಮಾರಸ್ವಾಮಿಯೇ ಟಾರ್ಗೆಟ್. ನನ್ನನ್ನ ಟಾರ್ಗೆಟ್ ಮಾಡಿ ನಿಮ್ಮ ರಾಜಕೀಯ ಶಕ್ತಿ, ವರ್ಚಸ್ಸು ಕಡಿಮೆ ಮಾಡಿಕೊಳ್ಳಬೇಡಿ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಆದರೆ ನಾನು ಎಲ್ಲ ನಾಯಕರಿಗೂ ಹೇಳುವುದು ಒಂದೇ, ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆಗೆ ಹೋದರೆ ಕೆಸರೆರಚಾಟ. ವೈಯಕ್ತಿಕ ವಿಚಾರ ಬಿಟ್ಟು  ಮಾಡಿದ ಕೆಲಸದ ಆಧಾರದ ಮೇಲೆ ಚರ್ಚೆ ಮಾಡಲಿ ಎಂದು ಹೆಚ್.ಡಿಕೆ ಸಲಹೆ ನೀಡಿದರು.

Key words: hubli-former cm-HD kumaraswamy-siddaramaiah-BJP-B team-jds