ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿದಾಯ ಸಮಯದಲ್ಲಿ ಯಶಸ್ವಿಯಾಗಿ ರಕ್ಷಣಾ ವ್ಯವಸ್ಥೆ ನಿರ್ವಹಿಸಿದ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೃತಜ್ಞತೆ

ಬೆಂಗಳೂರು, ನವೆಂಬರ್ 2.2021(www.justkannada.in):  ನಟ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ  ವಿದಾಯ ಸಂದರ್ಭದಲ್ಲಿ ಹರಿದು ಬಂದ ಜನಸಾಗರವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಸಾರ್ವಜನಿಕರ  ಮೆಚ್ಚುಗೆಗೆ ಪಾತ್ರರಾದ ಪೊಲೀಸ್ ಸಿಬ್ಬಂದಿಯನ್ನು ಗೃಹ ಸಚಿವ  ಆರಗ ಜ್ಞಾನೇಂದ್ರ ಅವರು ಹೃತ್ಪೂರ್ವಕವಾಗಿ, ಅಭಿನಂದಿಸಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು  ಇಂದು ರಾಜ್ಯ  ಪೊಲೀಸ್ ಮುಖ್ಯ ಕಚೇರಿಯಲ್ಲಿ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ರವರ ಅನಿರೀಕ್ಷಿತ ನಿಧನ ಹಾಗೂ ಅಂತಿಮ ಕಾರ್ಯದ ವೇಳೆ ಯೋಜನಾಬದ್ಧವಾಗಿ ರಕ್ಷಣಾ ವ್ಯವಸ್ಥೆ  ನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಅರ್ಪಿಸಿದರು.

ಇದೇ ಸಂದರ್ಭದಲ್ಲಿ  ತಮ್ಮ ವಿಶೇಷ ಕರ್ತವ್ಯ ನಿರ್ವಹಣೆಗೆ ನೀಡಲಾಗುವ ಭತ್ಯೆ ಹಾಗೂ ಇನ್ನಿತರ ಸವಲತ್ತುಗಳನ್ನು, ಕಾನ್ಸ್ಟೇಬಲ್ ಗಳಿಗೆ,  ಇನ್ನು ಹತ್ತು ದಿನಗಳ ಒಳಗೆ ಪಾವತಿಸಲು ಕ್ರಮ ತೆಗೆದುಕೊಳ್ಳುವಂತೆಯೂ, ಸಚಿವ ಅರಗ ಜ್ಞಾನೇಂದ್ರ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು ಮಾತನಾಡಿ, ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಹಾಗೂ ಅಂತಹ ಕ್ಲಿಷ್ಟರವಾದ ಸನ್ನಿವೇಶವನ್ನು, ವಿವರಿಸಿದ್ದಲ್ಲದೆ,  ಎಲ್ಲಾ ಪೊಲೀಸ್ ಅಧಿಕಾರಿಗಳು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ, ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು, ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಹ ನಮ್ಮ ಜೊತೆಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದರು. ಅನಿರೀಕ್ಷಿತ ಹಾಗೂ ಸವಾಲಿನ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಗಳಿಸಿದ ಅನುಭವವನ್ನು ಒಂದು ‘ ಮಾದರಿ ಕೇಸ್ ಸ್ಟಡಿ’ ಆಗಿ ದಾಖಲಿಸಬೇಕು ಎಂದೂ ಅವರು, ತಿಳಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ತಮ್ಮ ಅನುಭವವನ್ನು ಹಂಚಿಕೊಂಡರು.

Key words: Home Minister -Aaraga Jnanendra – grateful – police