ಉನ್ನತ ಶಿಕ್ಷಣ ಡಿಜಿಟಲೀಕರಣ: ಜುಲೈ 15ರಿಂದ ವಿವಿಗಳಿಂದ ಇ-ಅಫೀಸ್‌ ಮೂಲಕವೇ ಕಡತ ರವಾನೆ…

ಬೆಂಗಳೂರು,ಜೂ,30,2020(www.justkannada.in): ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಸಂಪೂರ್ಣ ಡಿಜಿಟಲೀಕರಣದತ್ತ ಹೆಜ್ಜೆ ಇಟ್ಟಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಜುಲೈ 15ರಿಂದ ಎಲ್ಲಾ ವಿಶ್ವವಿದ್ಯಾಲಯಗಳೂ ಸರ್ಕಾರದ ಜತೆ ಇ-ಆಫೀಸ್‌ (ಆನ್‌ಲೈನ್‌) ಮೂಲಕವೇ ವ್ಯವಹರಿಸಬೇಕು ಎನ್ನುವ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ, ಎನ್‌ಐಸಿ ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್‌ಲೈನ್‌ ಸಂಯೋಜನೆ (ಅಫಿಲಿಯೇಷನ್‌)ಯ ಪೋರ್ಟಲ್‌ ಉದ್ಘಾಟಿಸಿದ ನಂತರ ಡಿಸಿಎಂ ಅಶ್ವಥ್ ನಾರಾಯಣ್  ಮಾಧ್ಯಮದ ಜತೆ ಮಾತನಾಡಿದರು . ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಡಿಯೊ ಸಂವಾದದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇ-ಅಫೀಸ್‌ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ? ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಯಾವುದೇ ಕಾಲೇಜು ಅಥವಾ ಕೋರ್ಸ್‌ಗಳಿಗೆ ಮಾನ್ಯತೆ ನೀಡಬೇಕಾದರೂ ಆದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುತ್ತದೆ; ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು ಎಂದು ಅವರು ಹೇಳಿದರು.

ಮಾನ್ಯತೆ ನೀಡುವುದಕ್ಕೂ ಮುನ್ನ ಎಲ್ಲ ರೀತಿಯ ಮಾನದಂಡಗಳನ್ನು ಸರಿಯಾಗಿ ವಿಶ್ವವಿದ್ಯಾಲಯಗಳು ಪರಿಶೀಲಿಸಿರಬೇಕು. ಸರ್ಕಾರಕ್ಕೆ ಕಳುಹಿಸುವ ಎಲ್ಲ ಪ್ರಸ್ತಾವನೆಗಳು ಕಾನೂನುಬದ್ಧವಾಗಿಯೇ ಇರಬೇಕು. ಮೂಲಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳಿಗೇ ವಿಶ್ವವಿದ್ಯಾಲಯಗಳು ಮಾನ್ಯತೆ ನೀಡಬೇಕು. ಒಟ್ಟಾರೆ ಸರ್ಕಾರಕ್ಕೆ ಕಳಹಿಸುವ ಕಡತಗಳು ದೋಷರಹಿತವಾಗಿರಬೇಕು. ಒಂದು ವೇಳೆ ಲೋಪಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರನ್ನೇ ಹೊಣೆಗಾರರನ್ನಾಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಸಂಯೋಜನೆ ವಿಷಯದಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲ. ಮೂಲಸೌಲಭ್ಯ ಇರುವ ಸಂಸ್ಥೆಗೆ ಸಂಯೋಜನೆ ನೀಡಿದರೆ ಗುಣಮಟ್ಟದ ಶಿಕ್ಷಣ ತನ್ನಿಂತಾನೆ ಬರುತ್ತದೆ. ಈ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಇದುವರೆಗೂ ಸಂಯೋಜನೆ ಹೆಸರಲ್ಲಿ ಬರೀ ಕಾಲಹರಣವಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರಲ್ಲದೆ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿತ್ತು. ಹೊಸ ವ್ಯವಸ್ಥೆಯಿಂದ ಎಲ್ಲವೂ ಪಾರದರ್ಶಕ. ಶಿಕ್ಷಕರ ಸಂಖ್ಯೆ, ಅವರ ಕಾರ್ಯದಕ್ಷತೆ, ವಿದ್ಯಾರ್ಥಿಗಳ ಪ್ರಮಾಣ, ಸೌಲಭ್ಯಗಳು ಸೇರಿ ಎಲ್ಲ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ಸರ್ಕಾರಕ್ಕೆ ಇರುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಪದವಿ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಏನಿದು ಆನ್‌ಲೈನ್ ಸಂಯೋಜನೆ?

* ಇದುವರೆಗೂ ವಿವಿಗಳು ಮತ್ತು ಸರಕಾರದ ನಡುವೆ ಎಲ್ಲ ವ್ಯವಹಾರಗಳು ಕಡತ, ಟಪಾಲು ಇಲ್ಲವೇ ಪತ್ರ ಮುಕೇನ ನಡೆಯುತ್ತಿದ್ದವು. ಇನ್ನು ಮುಂದೆ ಇವೆಲ್ಲವೂ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯಲಿವೆ.

* ಮ್ಯೂನುವಲ್ ಮಾಡುತ್ತಿದ್ದ ಪ್ರಕ್ರಿಯೆಯಲ್ಲಿ ಬಹಳಷ್ಟು ಲೋಪಗಳಿದ್ದವು. ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದ್ದವು. ಇದೆಲ್ಲವನ್ನೂ ಆನ್‌ಲೈನ್ ಸಂಯೋಜನೆ ನಿವಾರಿಸಲಿದೆ.

* ಇದನ್ನು “ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ” ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆ ತುಂಬಾ ಆಧುನಿಕವಾಗಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್.ಐ.ಸಿ) ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ. ಸಂಪೂರ್ಣ ದೋಷರಹಿತವಾಗಿದೆ.

* ವಿವಿಗಳು ಹೊಸ ಕಾಲೇಜುಗಳಿಗೆ ಅನುಮತಿ, ಕೋರ್ಸುಗಳಿಗೆ ಒಪ್ಪಿಗೆಯೂ ಸೇರಿದಂತೆ ಮಾನ್ಯತೆ ನೀಡುವ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಇದರ ಮೂಲಕವೇ ಮಾಡಬೇಕು.

* ಈ ವ್ಯವಸ್ಥೆಯಿಂದ ವಿವಿ ಮತ್ತು ಕಾಲೇಜುಗಳ ನಡುವಿನ ವ್ಯವಹಾರ ಸುಲಭ, ಸರಳವಾಗಿರುತ್ತದೆ.

* ಈ ವ್ಯವಸ್ಥೆಯು ಕಾಲೇಜುಗಳಿಗೆ ಡೇಟಾ ಮತ್ತು ಡಾಕ್ಯುಮೆಂಟ್‌ಗಳನ್ನು ಅಫಿಲಿಯೇಶನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಎಲ್ಲ ಮಾಹಿತಿ ಪಾರದರ್ಶಕ. ಪೋರ್ಟಲ್‌ನಲ್ಲಿ ವಿವಿಗಳು ಕಳುಹಿಸಿದ ಅಧಿಸೂಚನೆಗಳನ್ನು ಕಾಲೇಜುಗಳು ವೀಕ್ಷಿಸಬಹುದು.

ಆನ್‌ಲೈನ್ ಸಂಯೋಜನೆ ಉದ್ದೇಶ:

* ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ

* ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಣೆ

* ಆಡಳಿತಕ್ಕೆ ತ್ವರಿತ ನಿರ್ಧಾರ ಬೆಂಬಲದ ವ್ಯವಸ್ಥೆ

* ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸ್ತುತ ತಂತ್ರಜ್ಞಾನ ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ

* ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಫಲಿತಾಂಶಗಳ ಬಗ್ಗೆ ಮಾಹಿತಿ ಸಂಗ್ರಹ ಸುಲಭ.

Key words: Higher Education- Digitalization-file – transmitted- via e-Office-DCM –Ashwath narayan