ಅಪರಾಧ ಸರಣಿ ಸಂಚಿಕೆಯ ಪ್ರಸಾರವನ್ನು ಬ್ಲಾಕ್ ಮಾಡುವಂತೆ ಓಟಿಟಿ ವೇದಿಕೆಗೆ ಉಚ್ಛ ನ್ಯಾಯಾಲಯ ನಿರ್ದೇಶನ

 

ಬೆಂಗಳೂರು, ಅಕ್ಟೋಬರ್ ೪, ೨೦೨೧ (www.justkannada.in): ಮಾನ್ಯ ಉಚ್ಛ ನ್ಯಾಯಾಲಯವು ‘A Murdered Mother’ ಎಂಬ ಶೀರ್ಷಿಕೆಯುಳ್ಳ ಅಪರಾಧದ ಕಥೆಯಿರುವ ಟಿವಿ ಸೀರಿಯಲ್ ಸರಣಿಯ ಒಂದು ಸಂಚಿಕೆಯ ಪ್ರಸಾರವನ್ನು ನಿಲ್ಲಿಸುವಂತೆ ಓವರ್ ದಿ ಟಾಪ್ (ಓಟಿಟಿ) ವೇದಿಕೆಗೆ ನಿರ್ದೇಶನ ನೀಡಿದೆ.

ಕೆ.ಆರ್. ಪುರಂ ಪೋಲಿಸ್ ಠಾಣೆಯಲ್ಲಿ ನೋಂದಣಿಯಾಗಿರುವಂತಹ ಒಂದು ಕೊಲೆ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತಿರುವ ಓರ್ವ ದೂರುದಾರರು, ಪೋಲಿಸ್ ವಿಚಾರಣೆ ಹಾಗೂ ಪೊಲೀಸರಿಗೆ ಅವರು ನೀಡಿದಂತಹ ಹೇಳಕೆಯಿರುವ ವೀಡಿಯೊವನ್ನು ಆ ಟಿವಿ ಸೀರಿಯಲ್‌ನ ಸಂಚಿಕೆಯಲ್ಲಿ ತೋರಿಸಲಾಗಿದೆ ಎಂದು ದೂರು ದಾಖಲಿಸಿದ್ದರು.

ಈ ಕುರಿತಂತೆ ವಿಚಾರಣೆ ನಡೆಸಿದಂತಹ ನ್ಯಾಯಮೂರ್ತಿ ಬಿ.ಎನ್. ಶ್ಯಾಂ ಅವರು ಮುಂದಿನ ಆದೇಶ ನೀಡುವವರೆಗೂ ಆ ಅಪರಾಧದ ಟಿವಿ ಸರಣಿಯ ಸಂಚಿಕೆಯನ್ನು ಪ್ರಸಾರ ಮಾಡದಿರುವಂತೆ ಸೂಚಿಸಿದ್ದಾರೆ. ಜೊತೆಗೆ, ನ್ಯಾಯಾಲಯವು ಪ್ರತಿವಾದಿಗಳಿಗೆ ತುರ್ತು ಸೂಚನೆಯೊಂದನ್ನು ಹೊರಡಿಸಿ, ವಿಚಾರಣೆಯನ್ನು ಅಕ್ಟೋಬರ್ ೨೧ಕ್ಕೆ ನಿಗಧಿಪಡಿಸಿದೆ.

ದೂರುದಾರರಾದ ಶ್ರೀಧರ್ ರಾವ್ ಹಾಗೂ ಮತ್ತೊಬ್ಬರನ್ನು ೨೦೧೮ರಲ್ಲಿ ಬಂಧಿಸಲಾಗಿತ್ತು ಮತ್ತು ಅವರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ತಮ್ಮನ್ನು ಸಂದರ್ಶಿಸಿದ ವೀಡಿಯೊ ಹಾಗೂ ಹಲವು ಪೊಲೀಸ್ ಅಧಿಕಾರಿಗಳ ಸಂದರ್ಶನವನ್ನು ವೀಡಿಯೊ ರೆಕಾರ್ಡಿಂಗ್ ಮಾಡಿಕೊಳ್ಳಲು ‘ಮಿನ್ನೋ ಫಿಲಮ್ಸ್’ ಎಂಬ ಸಂಸ್ಥೆಗೆ ಪೊಲೀಸರು ಅನುಮತಿ ನೀಡಿದ್ದರು ಎಂದು ಶ್ರೀಧರ್ ರಾವ್ ಅವರು ಅರೋಪಿಸಿದ್ದರು.
ದೂರುದಾರರಿಗೆ ಯಾವುದೇ ಅನುಮತಿ ಇಲ್ಲದೆ ಅವರ ಬಂಧನಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನೀಡುವಂತೆ ಬಲವಂತ ಪಡಿಸಲಾಗಿತ್ತಂತೆ. ತಾವು ಪೊಲೀಸ್ ಬಂಧನದಲ್ಲಿದ್ದಾಗ ‘ಮಿನ್ನೋ ಫಿಲಮ್ಸ್’ ಒದಗಿಸಿದ್ದಂತಹ ಒಂದು ಕಾಗದದ ಮೇಲೆ ಪೋಲಿಸರು ಬಲವಂತವಾಗಿ ಸಹಿ ಪಡೆದಿದ್ದರು ಎಂದು ರಾವ್ ಆರೋಪಿಸಿದ್ದರು.

ಸೆಪ್ಟೆಂಬರ್ ೨೨, ೨೦೨೧ರಂದು ದೂರುದಾರರು ‘Crime Stories’ ಎಂಬ ಶೀರ್ಷಿಕೆಯುಳ್ಳ ಅಂತರ್ಜಾಲ ಆಧಾರಿತ ಸರಣಿ ಸಾಕ್ಷ್ಯ ಚಿತ್ರವನ್ನು ಓಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳಿಸಿರುವುದನ್ನು ಗಮನಿಸಿದ್ದಾರೆ. ‘A Murdered Mother’ ಎಂಬ ಶೀರ್ಷಿಕೆಯುಳ್ಳ ಮೊದಲ ಸಂಚಿಕೆಯಲ್ಲಿ ಓಟಿಟಿ ವೇದಿಕೆಯು ದೂರುದಾರರು ಪೊಲೀಸ್ ಬಂಧನದಲ್ಲಿರುವಾಗ ನಡೆಸಿದಂತಹ ತಪಾಸಣೆ, ವಿಚಾರಣೆ ಹಾಗೂ ಹೇಳಿಕೆಗಳನ್ನು ಪ್ರಸಾರ ಮಾಡಿದ್ದು, ಅದರಲ್ಲಿ ಇಂಗಿತ ತಪ್ಪೊಪ್ಪಿಗೆ ಇರುವ ತುಣುಕುಗಳಿದ್ದವು.

ಅದರಿಂದ ಮುಕ್ತ ಹಾಗೂ ನ್ಯಾಯಯುತ ವಿಚಾರಣೆಯ ತನ್ನ ಹಕ್ಕಿನ ಉಲ್ಲಂಘನೆಯ ಜೊತೆಗೆ ತನ್ನ ಖಾಸಗಿತನ, ತನ್ನ ವೈಯಕ್ತಿಕ ಬದುಕಿನ ಉಲ್ಲಂಘನೆಯೂ ಆಗಿದ್ದು, ಆ ವೀಡಿಯೊದಲ್ಲಿ ತಮ್ಮ ಬದುಕನ್ನು ಒಂದು ವಸ್ತುವನ್ನಾಗಿ ಪ್ರಸಾರ ಮಾಡಲಾಗಿದ್ದು, ತಮ್ಮನ್ನು ವಾಣಿಜ್ಯ ಕತೆಗಾಗಿ ಬಳಸಿಕೊಳ್ಳಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಈ ಸಂಬಂಧ ದೂರುದಾರರು ಓಟಿಟಿ ವೇದಿಕೆಯ ವಿರುದ್ಧ ಆ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸುವಂತೆ ಕೋರಿ ದೂರು ದಾಖಲಿಸಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ಆ ದೂರಿಗೆ ಕೇವಲ ತುರ್ತು ಸೂಚನೆಯನ್ನು ಜಾರಿಗೊಳಿಸಿ, ಶಾಶ್ವತ ತೀರ್ಪನ್ನು ನೀಡದೆ ಇದ್ದುದರಿಂದಾಗಿ ದೂರುದಾರರು ಉಚ್ಛ ನ್ಯಾಯಲಯದ ಮೊರೆ ಹೋಗಿದ್ದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : high-court-directs-OTT-platform-to-block-episode-of-crime-series