ದ್ವೇಷ ಭಾಷಣ : ಅರ್ಜಿ ವಜಾಗೊಳಿಸಿದ ಹೈಕೋರ್ಟ್….

ಬೆಂಗಳೂರು, ಜೂ,1,2020(www.justkannada.in): ಕಾನೂನು ಉಲ್ಲಂಘಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ದ್ವೇಷ ಭಾಷಣಗಳ ವರದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿ ಮಾಧ್ಯಮಗಳು ಹಾಗೂ ಅಂತಹ ಭಾಷಣಗಳನ್ನು ಮಾಡುವ ರಾಜಕೀಯ  ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿತ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ.

ದ್ವೇಷ ಭಾಷಣಗಳ ವಿರುದ್ಧ ಜನಾಂದೋಲನ ಸಂಸ್ಥೆ ಹಾಗೂ ಕ್ಯಾಂಪೇನ್ ಎಗೇಂನ್ಸ್ಟ್ ಹೇಟ್ ಸ್ಪೀಚ್ (CAMPAIGN AGAINST HATE SPEECH)ನ ಎ.ಆರ್. ವಾಸವಿ ಮತ್ತು ಸ್ವಾತಿ ಶೇಷಾದ್ರಿ ಎಂಬುವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.hate-speech-high-court-dismissed-petition

ದ್ವೇಷ ಭಾಷಣಗಳ ವಿರುದ್ಧ ಸಮರ ಸಾರಿರುವ ಜನಾಂದೋಲನ ಸಂಸ್ಥೆಯು ವಕೀಲರು, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ವೃತ್ತಿಪರರನ್ನು ಒಳಗೊಂಡ ನೋಂದಣಿಯಾಗದ ಸಂಸ್ಥೆಯಾಗಿದ್ದು ರಾಜ್ಯ ಸರ್ಕಾರ, ಗೃಹ ಇಲಾಖೆ, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ, ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ, ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸೇರಿದಂತೆ 11 ಸಂಸ್ಥೆಗಳನ್ನು ಪ್ರತಿವಾದಿಯಾಗಿ ಮಾಡಿತ್ತು.

ಕಾನೂನು ಉಲ್ಲಂಘಿಸಿ ರಾಜಕಾರಣಿಗಳು ನಿರ್ದಿಷ್ಠ ಸಮುದಾಯದ ವಿರುದ್ದ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ರೆಗ್ಯುಲೇಷನ್) ಆಕ್ಟ್ 1995 ಅನ್ನು ಉಲ್ಲಂಘಿಸಿ ಟೆಲಿವಿಷನ್ ಮಾಧ್ಯಮಗಳು ದ್ವೇಷದ ಭಾಷಣಗಳ ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಇದರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಂವಿಧಾನದ ವಿಧಿ 226 ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಂಬಂಧಿತ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಅರ್ಜಿಯು ನ್ಯಾಯಮೂರ್ತಿಗಳಾದ ನ್ಯಾ ಬಿ.ವಿ.ನಾಗರತ್ನ ಹಾಗೂ ನ್ಯಾ ಎಂ.ಜಿ.ಉಮಾ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ಕುರಿತು ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಸ್ತುತ ಸಂದರ್ಭದಲ್ಲಿ “ದ್ವೇಷ ಭಾಷಣ” ಎಂಬ ಪರಿಕಲ್ಪನೆಯ ಕುರಿತು ಶಾಸನ ರಚಿಸುವುದು ಸೂಕ್ತವೆಂದು ಸಂಸತ್ತು ಇನ್ನೂ  ಯೋಚಿಸಿಲ್ಲ. ದ್ವೇಷ ಭಾಷಣ ಕುರಿತು ಯಾವುದೇ ವ್ಯಾಖ್ಯಾನವೇ ಇಲ್ಲದಿರುವಾಗ ಕೇವಲ ಸಮಾಜದ ಒಂದು ವರ್ಗಕ್ಕೆ ಅಥವಾ ಸಾಮಾನ್ಯವಾಗಿ ಸಮಾಜದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ಆಧಾರದಲ್ಲಿ ಸಂವಿಧಾನದ ವಿಧಿ 226 ರ ಅಡಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಮುಂದುವರೆದು, ಈ ವಿಚಾರದಲ್ಲಿ  ರಾಜ್ಯ ಶಾಸನಸಭೆ ಅಥವಾ ಸಂಸತ್ತಿಗೆ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದೂ ಅಭಿಪ್ರಾಯಪಟ್ಟ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು.

ನ್ಯಾಯಾಲಯದಲ್ಲಿ ಸಹಾಯಕ ಅಡ್ವೊಕೇಟ್ ಜನರಲ್ ಆರ್ ಸುಬ್ರಹ್ಮಣ್ಯ ಹಾಗೂ ಟಿ ಎಲ್ ಕಿರಣ್ ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.

Key words: Hate speech- High Court -dismissed –petition