ಶಬರಿಮಲೆ ಯಾತ್ರೆ ಹೊರಡಲು ಹ್ಯಾಟ್ರಿಕ್‌ ಹೀರೊ ಶಿವಣ್ಣ ಸಜ್ಜು

ಬೆಂಗಳೂರು, ಫೆಬ್ರವರಿ 24, 2020 (www.justkannada.in): ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಹೊರಡಲು ಸಜ್ಜಾಗಿದ್ದಾರೆ.

ಬೆಂಗಳೂರಿನ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶನಿವಾರ ಬೆಳಗ್ಗೆ ಸ್ನೇಹಿತರೊಟ್ಟಿಗೆ ಶಿವಣ್ಣ ವಿಶೇಷ ಪೂಜೆ ಸಲ್ಲಿಸಿ, ಮಾಲೆ ಧರಿಸಿದರು. ಈ ಸಂದರ್ಭದಲ್ಲಿ ಅವರ ಜತೆಗೆ ಪತ್ನಿ ಗೀತಾ ಇದ್ದರು.

ಹಲವು ವರ್ಷಗಳಿಂದ ಶಿವಣ್ಣ ಶಬರಿಮಲೆ ಯಾತ್ರೆ ನಡೆಸಿಕೊಂಡು ಬಂದಿದ್ದು, ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್‌ ನಿಧನದ ನಂತರ ಯಾತ್ರೆಯನ್ನು ಕೈಗೊಂಡಿರಲಿಲ್ಲ.

ಚಿತ್ರರಂಗದಲ್ಲಿನ ತಮ್ಮ ಸ್ನೇಹಿತರೊಡಗೂಡಿ ಮಾಲೆಧಾರಣೆ ಮಾಡಿರುವ ಶಿವಣ್ಣ ಈಗ ವ್ರತಾಚರಣೆಯಲ್ಲಿದ್ದು, ಮಾರ್ಚ್‌ 14ರಂದು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದಾರೆ. ನಿರ್ದೇಶಕ ರಘುರಾಂ ಸಹ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದು, ಶಿವಣ್ಣಗೆ ಸಾಥ್‌ ನೀಡಿದ್ದಾರೆ.