ಪರಿಷ್ಕರಣೆ ಸಮಿತಿ ಕೈಬಿಡಿ, ಈ ವರ್ಷ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಿ: ಎಚ್.ವಿಶ್ವನನಾಥ್ ಆಗ್ರಹ

ಮೈಸೂರು, ಮೇ 27, 2022 (www.justkannada.in):  ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಅಡುಗೂರು ಎಚ್ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ವಿವಾದದ ಸ್ವರೂಪ ಪಡೆದಿದೆ.  ಹೀಗಾಗಿ ಈ ವರ್ಷ ಹಳೆಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕು. ಹೀಗಾಗಿ ಮುದ್ರಣವಾಗಿ ವಿತರಣೆಯಾಗಿದ್ದರೂ ಅದನ್ನು ವಾಪಸ್‍ ಪಡೆಯಬೇಕು. ಇದರಿಂದ ಸರಕಾರಕ್ಕೆ ನಷ್ಟವಾದರೂ ಪರವಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇತ್ತೀಚೆಗೆ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣೆಗೆ ಹೆಚ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ಸರ್ವ ಸಮ್ಮತವಾಗಿರಬೇಕು. ಜನ ತಾಂತ್ರಿಕವಾಗಿರಬೇಕು, ಜಾತ್ಯಾತೀತ ಆಗಿರಬೇಕು. ಇಡೀ ಶೈಕ್ಷಣಿಕ ಕ್ಷೇತ್ರವನ್ನು ಮಲಿನ‌ಗೊಳಿಸುವ ಹುನ್ನಾರ ಈಗ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು‌. ಕೂಡಲೇ ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ದಪಡಿಸಿರುವ ಪಠ್ಯಕ್ರಮವನ್ನು ರದ್ದುಗೊಳಿಸಬೇಕು. ಕಳೆದ ಬಾರಿಯ ಪಠ್ಯಕ್ರಮವನ್ನೇ ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಸರ್ವರೂ ಒಪ್ಪುವ ಪಠ್ಯಕ್ರಮವನ್ನು ಜಾರಿಗೆ ತರಬೇಕು. ವಿವಿಧ ವಲಯಗಳ ತಜ್ಞರು, ಪೋಷಕರನ್ನು ಒಳಗೊಂಡ ಸಮಿತಿ ರಚಿಸಿ ನೂತನ ಪಠ್ಯ ಕ್ರಮವನ್ನು ಅಳವಡಿಸಬೇಕು ಎಂದು ಮೈಸೂರಿನಲ್ಲಿ ಹೆಚ್ ವಿಶ್ವನಾಥ್ ಹೇಳಿದರು.