ಪ್ರವಾಸೋದ್ಯಮ ಇಲಾಖೆಗೆ ಅನುದಾನ: ರಾಜ್ಯ ಬಜೆಟ್ ಸ್ವಾಗತಿಸಿದ ಸಚಿವ ಸಿ.ಪಿ ಯೋಗೇಶ್ವರ್…

ಬೆಂಗಳೂರು,ಮಾರ್ಚ್,8,2021(www.justkannada.in): ಒಂದು ರಾಜ್ಯ ಹಲವು ಜಗತ್ತು ಘೋಷವಾಕ್ಯದಂತೆ ರಾಜ್ಯದಲ್ಲಿರುವ ವೈವಿದ್ಯಮಯ ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಒದಗಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ರೂ.500.00 ಕೋಟಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.jk

ಇಂದು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ ಯೋಗೇಶ್ವರ್, ಸಾಮಾಜಿಕ ನ್ಯಾಯದೊಂದಿಗೆ ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಆತ್ಮ ನಿರ್ಭರ ಭಾರತದ ಬೆಳಕಿನಲ್ಲಿ ಸ್ವಾವಲಂಬಿ ಕರ್ನಾಟಕ ರೂಪಿಸಲು ಈ ಬಜೆಟ್ ಸಹಕಾರಿಯಾಗಲಿದೆ.  ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಗಡಿಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ.  ರಾಜ್ಯದ ಸಮಗ್ರ ಅಭಿವೃದ್ಧಿ ಪರವಾಗಿರುವ 2021-22ನೇ ಸಾಲಿನ ಬಜೆಟ್‍ನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಬೆಂಗಳೂರು ಸುತ್ತಮುತ್ತ ಪ್ರವಾಸಿ ತಾಣಗಳನ್ನು ಗುರುತಿಸಿ ವಾರಾಂತ್ಯ ಪ್ರವಾಸಿ ವೃತ್ತವನ್ನು ಅಭಿವೃದ್ಧಿಪಡಿಸಲಾಗುವುದು.  ಮೈಸೂರು ಜಿಲ್ಲೆಯ ಕಬಿನಿ ಆಣೆಕಟ್ಟಿನ ಕೆಳಭಾಗದಲ್ಲಿ ರೂ.50.00 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಉದ್ಯಾನವನ ನಿರ್ಮಿಸಲಾಗುವುದು ಎಂದು ಸಚಿವ ಸಿ.ಪಿ ಯೋಗೇಶ್ವರ್ ನುಡಿದರು.

ರಾಜ್ಯವು 320 ಕಿ.ಮೀ ಕಡಲ ಕಿನಾರೆಯನ್ನು ಹೊಂದಿದ್ದು, ಕಡಲ ತೀರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಅಂತರರಾಜ್ಯ ದರ್ಜೆಗೆರಿಸಲು ಕ್ರಮ ಕೈಗೊಳ್ಳಲಾಗುವುದು. ಉಡುಪಿ ಜಿಲ್ಲೆಯ ತ್ರಾಸಿ ಮರವಂತೆ ಮತ್ತು ಒತ್ತಿನೆಣೆ ಕಡಲ ತೀರಗಳನ್ನು ರೂ.10.00 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಸೋಮೇಶ್ವರ ಕಡಲ ತೀರ ಅಭಿವೃದ್ಧಿಗೆ ರೂ.10.00 ಕೋಟಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾಗೆಯೇ ಬಳ್ಳಾರಿಯ ಕುಡುತಿನಿ ಬೂದಿದಿಬ್ಬವನ್ನು ರೂ.5.00 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ನಿರ್ವಣೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದ್ದು, ಇವುಗಳನ್ನು ಅಂತರರಾಷ್ಟ್ರೀಯ ಪರಿಸರ ತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ತದಡಿಯಲ್ಲಿ 1000 ಎಕರೆ ಪ್ರದೇಶದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು. Grants – Tourism Department-Minister -CP Yogeshwar -welcomed - state budget

ತುಮಕೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಮತ್ತು ಉಡುಪಿಯಲ್ಲಿ ಶ್ರೀ ಪೇಜಾವರಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನವನ್ನು ತಲಾ ರೂ.2.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ರಾಜ್ಯದ ಪೂರ್ವ ಪ್ರಸ್ಥಭೂಮಿ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಲೆಸ್ಸರ್ ಫ್ಲೋರಿಕನ್ ಪಕ್ಷಿ ಪ್ರಬೇಧ ಸಂರಕ್ಷಣೆಗೆ ರೂ.50.00 ಲಕ್ಷಗಳನ್ನು ಒದಗಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ತ್ಯಾಜ್ಯ ಸಂರಕ್ಷಣೆ ಹಾಗೂ ಎಸ್‍.ಟಿ.ಪಿ ಘಟಕಗಳ ಸ್ಥಾಪನೆಗೆ ಹಣವನ್ನು ನೀಡಲಾಗಿದೆ. ಒಟ್ಟಾರೆ, ಎಲ್ಲರನ್ನು ಒಳಗೊಂಡ ಅಭಿವೃದ್ಧಿಪರವಾದ ಆಯವ್ಯಯವನ್ನು  ಸಿಎಂ ಬಿಎಸ್ ವೈ ಮಂಡಿಸಿದ್ದಾರೆ ಎಂದು ಸಿ.ಪಿ ಯೋಗೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

Key words: Grants – Tourism Department-Minister -CP Yogeshwar -welcomed – state budget