ಹಣ್ಣು, ತರಕಾರಿ ನೇರ ಖರೀದಿಗೆ ಸರ್ಕಾರ ಮುಂದಾಗಲಿ: ಸಿದ್ದರಾಮಯ್ಯ

kannada t-shirts

ಬೆಂಗಳೂರು, ಏಪ್ರಿಲ್ 30, 2020 (www.justkannada.in): ಲಾಕ್‍ಡೌನ್ ನಿಂದಾಗಿ ರೈತ ಸಮುದಾಯ ತೀವ್ರವಾಗಿ ಸಂಕಷ್ಟಕ್ಕೆ ಗುರಿಯಾಗಿದೆ. ಆದ್ದರಿಂದ ಕೃಷಿ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿ ಮಾಡುವ ಮೂಲಕ ಮಣ್ಣಿನ ಮಕ್ಕಳ ನೆರವಿಗೆ ಧಾವಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆ ಕುರಿತು ಸರ್ಕಾರದ ಗಮನ ಸೆಳೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ವಿರೋಧ ಪಕ್ಷದ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಖರೀದಿ ಮಾಡುವ ಹಣ್ಣು, ತರಕಾರಿಗಳನ್ನು ಸರ್ಕಾರ ಬಡವರಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ಬಂದು 40 ದಿನಗಳಾಗುತ್ತಿದೆ. ಲಾಕ್‍ಡೌನ್ ಮತ್ತೆ ಮುಂದುವರಿಯುವುದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಲಾಕ್‍ಡೌನ್ ನಿಂದಾಗಿ ರೈತರು ಮಾತ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಖರೀದಿ ಮಾಡುವವರಿಲ್ಲದೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಹಣ್ಣು, ತರಕಾರಿ ರೈತರ ಜಮೀನುಗಳಲ್ಲಿಯೇ ಕೊಳೆಯುತ್ತಿದೆ. ಸಾಗಣೆಗೂ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಹೀಗಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.
ಲಾಕ್‍ಡೌನ್ ನಿಂದಾಗಿ ಕೃಷಿ ಉತ್ಪನ್ನಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹಾಗೂ ಹೊರ ರಾಜ್ಯಗಳಿಗೆ ಸಾಗಿಸುವುದು ಕಷ್ಟವಾಗಿದೆ.

ಸರ್ಕಾರದ ಮಾಹಿತಿಯ ಪ್ರಕಾರವೇ ಈ ವರ್ಷದ ಬೇಸಿಗೆ ಋತುವಿನಲ್ಲಿ ರಾಜ್ಯದ ಉದ್ದಗಲಕ್ಕೂ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17 ಲಕ್ಷದ 38 ಸಾವಿರ ಟನ್ ಇಳುವರಿಯ ತರಕಾರಿ ಬೆಳೆಗಳಿವೆ.್ತ 1,91,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32,55,969 ಟನ್‍ಗಳಷ್ಟಿದೆ. ವಿವಿಧ ರೀತಿಯ ಹೂಗಳನ್ನು ಸುಮಾರು 11,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಹಾಗೂ ಸುಮಾರು 1,08,168 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಇದೆ.
ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್‍ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಹಾಗೂ ರೈತ ಕಾರ್ಮಿಕರ ಬದುಕು ದುಸ್ತರವಾಗಿದೆ.

ಇದರಿಂದ ರೈತರಿಗೆ ಸಾವಿರಾರು ಕೋಟಿ ಬೆಳೆಗಳು ನಷ್ಠವಾಗಿರುತ್ತದೆ. ಮತ್ತೊಂದು ಕಡೆ ಹಣ್ಣು, ಹಂಪಲು, ತರಕಾರಿ, ಹೂವು ಹಾಗೂ ಇನ್ನಿತರೇ ಪದಾರ್ಥಗಳು ದಿನನಿತ್ಯ ಲಭ್ಯವಾಗದೇ ಜನರು ಅದರಲ್ಲೂ ನಗರವಾಸಿಗಳು ಅತ್ಯಂತ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದರ ಜೊತೆಗೆ ಕೋಳಿ, ಕುರಿ, ಹಂದಿ, ಮೀನು ಮುಂತಾದವುಗಳನ್ನು ಸಾಕಾಣಿಕೆ ಮಾಡುವ ರೈತರೂ ಸಹ ಮಾರುಕಟ್ಟೆಯಿಲ್ಲದೇ ಮತ್ತು ವಿವಿಧ ರೀತಿಯ ಅಪಪ್ರಚಾರಗಳ ಕಾರಣಕ್ಕಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ. ಈ ಎಲ್ಲಾ ಪದಾರ್ಥಗಳನ್ನು ಕೊಯಿಲು ಮಾಡುವುದಕ್ಕೆ ಮತ್ತು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುತ್ತದೆ. ಇದರಿಂದ ರೈತಾಪಿ ವರ್ಗವು ಅತ್ಯಂತ ಕಷ್ಟಕ್ಕೆ ಗುರಿಯಾಗಿರುತ್ತದೆ.
ಹಣ್ಣು, ತರಕಾರಿಗಳು ಶೇ. 20-25ರಷ್ಟು ಮಾತ್ರ ರಾಜ್ಯದಲ್ಲಿ ಮಾರಾಟವಾಗುತ್ತವೆ. ಉಳಿದಂತೆ ಹೊರ ರಾಜ್ಯಗಳಲ್ಲಿಯೇ ಮಾರುಕಟ್ಟೆ ಅಧಿಕವಾಗಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾಗೆ ರೈತರು ಹಣ್ಣು, ತರಕಾರಿಗಳನ್ನು ಮಾರಾಟಕ್ಕೆ ಕೊಂಡೊಯ್ಯುತ್ತಾರೆ. ಹೊರ ದೇಶಗಳಿಗೂ ರಫ್ತಾಗುತ್ತದೆ. ಆದರೆ, ಲಾಕ್‍ಡೌನ್‍ನಿಂದ ಎಲ್ಲವೂ ಇದ್ದಲ್ಲೇ ಇದೆ ಎಂದು ಹೇಳಿದರು.
ಉಚಿತವಾಗಿ ಕೊಡುತ್ತೇವೆ ಎಂದು ರೈತರು ಹೇಳಿದರೂ ಹಣ್ಣು, ತರಕಾರಿ ಕೊಂಡೊಯ್ಯಲು ಯಾರೂ ಮುಂದೆ ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ನೆರವಾಗಿ ಖರೀದಿ ಮಾಡಿ ಹಣ್ಣು, ತರಕಾರಿಯನ್ನು ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡಬೇಕು. ಈ ವಿಚಾರದಲ್ಲಿ ಹಿಂದೆ ಮುಂದೆ ನೋಡದೆ ಬಡವರಿಗೆ ಸಹಾಯ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶ್ ಕುಮಾರ್, ವಿ.ಎಸ್. ಉಗ್ರಪ್ಪ, ಜೆಡಿಎಸ್‍ನ ಎಚ್.ಡಿ. ರೇವಣ್ಣ, ಬಂಡೆಪ್ಪ ಖಾಶೆಂಪೂರ್, ವೆಂಕಟರಾವ್ ನಾಡಗೌಡ, ಕುಪೇಂದ್ರ ರೆಡ್ಡಿ, ಚೌಡರೆಡ್ಡಿ, ಸಿಪಿಐಎಂನ ನಾಗರಾಜು, ಬಸವರಾಜು, ಸಿಪಿಐನ ಸ್ವಾತಿ ಸುಂದರೇಶ್, ಲೋಕತಾಂತ್ರಿಕ ಜನತಾದಳದ ಡಾ. ಎಂ.ಪಿ.ನಾಡಗೌಡ, ರೈತ ಸಂಘಟನೆಗಳ ಕೋಡಿಹಳ್ಳಿ ಚಂದ್ರಶೇಖರ, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್ ಸಭೆಯಲ್ಲಿ ಭಾಗವಹಿಸಿದ್ದರು.

website developers in mysore