ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ 2 ದಿನ ವಿಸ್ತರಣೆ

ಬೆಂಗಳೂರು, ಮೇ 04, 2020 (www.justkannada.in): ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು ಅದನ್ನು ಇನ್ನು 02 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ಈ ಸೌಲಭ್ಯ ಕೊನೆಗೊಳುವದಿತ್ತು; ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಇತರೆ ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ರವಿವಾರದಂದು(03/05/2020) 951 ಕೆ.ಎಸ್.ಆರ್.ಟಿ.ಸಿ. ಬಸ್ ಗಳನ್ನು ಒದಗಿಸಲಾಗಿದ್ದು ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿರುತ್ತಾರೆ.

ಇವತ್ತು ಈಗಾಗಲೇ 50 ಬಸ್ ಗಳಲ್ಲಿ ಸುಮಾರು 1,500 ಪ್ರಯಾಣಿಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ ಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ ಗಳನ್ನು ಈ ಸೌಲಭ್ಯಕ್ಕೋಸ್ಕರ ಕಾಯ್ದಿರಿಸಲಾಗಿದೆ.

ಶನಿವಾರದಂದು ಕೂಡ 550 ಬಸ್ಗಳಲ್ಲಿ ಅಂದಾಜು 16,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ.

ರವಿವಾರದಂದು(03/05/2020) ಎರಡು ರೈಲುಗಳು ಬಿಹಾರದ ಪಾಟ್ನಾ ಒಂದು ಜಾರ್ಖಂಡ್ನ ರಾಂಚಿಗೆ ತೆರಳಿವೆ. ಇದೇ ಸಮಯ ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು, ಒಟ್ಟು ನಾಲ್ಕು ರೈಲುಗಳು 4,800 ಪ್ರಯಾಣಿಕರನ್ನು ಆ ರಾಜ್ಯಗಳಿಗೆ ಕರೆದೊಯ್ದಿದೆ.

ಸೋಮವಾರದಂದು (04/05/2020) ಎರಡು ರೈಲುಗಳು ರಾಜಸ್ಥಾನದ ಜೈಪುರ್ ಮತ್ತು ಬಿಹಾರದ ಪಾಟ್ನಾಕ್ಕೆ ಹೊರಡಲಿವೆ.

ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.