ನಾನು ಶಿಕ್ಷಣ ಸಚಿವನಾಗಿ ಕೊಟ್ಟಿದ್ದ ಮಾತು ಈಡೇರಿದೆ : ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆ

kannada t-shirts

ತುಮಕೂರು,ಅಕ್ಟೋಬರ್,13,2021(www.justkannada.in): ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊರಟಗೆರೆಯ ವಿದ್ಯಾರ್ಥಿನಿ ಗ್ರೀಷ್ಮ ನಾಯಕ್ ಮನೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಶುಭಹಾರೈಸಿದರು.

ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಸಂತಸ ಹಂಚಿಕೊಂಡಿರುವ ಸುರೇಶ್ ಕುಮಾರ್, ಕೊರಟಗೆರೆಯ ಗ್ರೀಷ್ಮ ನಾಯಕ್ ಮನೆಗೆ 88 ದಿನಗಳ ನಂತರ (ಜುಲೈ 17)  ಮತ್ತೆ ಭೇಟಿ ನೀಡಿದೆ. ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲನೇ ಸ್ಥಾನ (first Rank) ಪಡೆದು ತನ್ನ ಸಾಮರ್ಥ್ಯ ತೋರಿರುವ ಗ್ರೀಷ್ಮ ಳನ್ನು ಭೇಟಿ ಮಾಡಿ ನಾನು ಮತ್ತು ನನ್ನ ಪತ್ನಿ ಅಭಿನಂದನೆ ಸಲ್ಲಿಸಿದೆವು. 88 ದಿನಗಳ ಹಿಂದಿನ ಆ ವಾತಾವರಣಕ್ಕೂ ಇಂದಿನ ಭೇಟಿಗೂ ಅದೆಷ್ಟು ವ್ಯತ್ಯಾಸ. ಅಂದು ಎಲ್ಲರಲ್ಲೂ ಆತಂಕ. ದುಗುಡ ತುಂಬಿದ ವಾತಾವರಣ. ಇಂದು ಸಂತಸ ಮತ್ತು ಲವಲವಿಕೆಯಿಂದ ಕೂಡಿದ ಮನೆ.

ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರೊಂದಿಗೆ ಮಾತನಾಡಿ ಗ್ರೀಷ್ಮ ನಾಯಕ್ ಗೆ (ಅವರ ಕುಟುಂಬದ ಇಚ್ಛೆಯಂತೆ) ಬೆಂಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನದ ವಿಷಯದಲ್ಲಿ ಮೊದಲನೇ ಪಿಯುಸಿಗೆ ಪ್ರವೇಶಾವಕಾಶ ದೊರಕಿಸಿಕೊಡಬೇಕೆಂದು ಕೋರಿದ್ದೇನೆ. ಅದಕ್ಕೆ ನಿರ್ದೇಶಕರು ಪೂರಕವಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೆಯೇ ಗ್ರೀಷ್ಮಾ ವೈದ್ಯಳಾಗಬೇಕೆಂಬ ಕನಸು ಹೊತ್ತಿದ್ದಾಳೆ. ಆ ಕನಸು ನನಸಾಗಲೆಂದು ನಾವೆಲ್ಲ ಹಾರೈಸೋಣ. ಕೊರಟಗೆರೆಯ ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಪರಮೇಶ್ವರ್ ಈಕೆ ವೈದ್ಯಳಾಗುವುದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಒದಗಿಸಿ ಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ಹೀಗಾಗಿ ಪರಮೇಶ್ವರ್ ಅವರಿಗೂ ಧನ್ಯವಾದಗಳು. ಜುಲೈ 19 ರಂದು ಗ್ರೀಷ್ಮ ಮತ್ತು ಅವಳ ತಂದೆ-ತಾಯಿಯವರಿಗೆ ನಾನು ಶಿಕ್ಷಣ ಸಚಿವನಾಗಿ ಕೊಟ್ಟಿದ್ದ ಮಾತು ಈಡೇರಿದೆ ಎಂದರು.

Key words: Former minister -Suresh Kumar- visits –student-home -First – SSLC -Supplementary Examination

website developers in mysore